ರಾಮನಗರ : ಕಾಲೇಜಿನ ಆಡಳಿತ ಮಂಡಳಿ ಕಿರುಕುಳದಿಂದ ಬೇಸತ್ತು ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.
19 ವರ್ಷದ ಅನಾಮಿಕ ಆತ್ಮಹತ್ಯೆ ಮಾಡಿಕೊಂಡ ಕೇರಳ ಮೂಲದ ವಿದ್ಯಾರ್ಥಿನಿ. ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಕನಕಪುರ ಬೆಂಗಳೂರು ರಸ್ತೆಯಲ್ಲಿರುವ ದಯಾನಂದ್ ಸಾಗರ್ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಹಾಸ್ಟೆಲ್ನಲ್ಲಿದ್ದ ಆಕೆ ನಿನ್ನೆ ಕಾಲೇಜಿಗೆ ಬಂದಿರಲಿಲ್ಲ. ಊಟಕ್ಕೂ ಬಂದಿರಲಿಲ್ಲ, ಗೆಳೆಯರು ಎಷ್ಟೇ ಕರೆ ಮಾಡಿದರೂ ರೆಸ್ಪಾನ್ಸ್ ಮಾಡಿರಲಿಲ್ಲ. ಆತಂಕಗೊಂಡ ಗೆಳೆಯರು ಹಾಸ್ಟೆಲ್ ಕಿಟಕಿಯಲ್ಲಿ ಇಣುಕಿ ನೋಡಿದ್ದಾರೆ. ಈ ವೇಳೆ ಅನಾಮಿಕ ನೇಣಿಗೆ ಶರಣಾಗಿದ್ದು ಕಂಡು ಬಂದಿದೆ.
ದಯಾನಂದ್ ಸಾಗರ್ ಮೆಡಿಕಲ್ ಕಾಲೇಜಿನ ಮ್ಯಾನೆಜ್ಮೆಂಟ್ ಕಿರುಕುಳದಿಂದಲೇ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾಲೇಜಿನ ಪ್ರಾಂಶುಪಾಲರ ಹೇಳಿಕೆಗಳಿಗೆ ಮಾನಸಿಕವಾಗಿ ನೊಂದಿದ್ದಳು ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಕೇರಳದ ಕಣ್ಣೂರಿನಿಂದ ಬಂದಿದ್ದ ಅನಾಮಿಕ ಉತ್ತಮ ವಿದ್ಯಾರ್ಥಿಯಾಗಿದ್ದಳು. ಕಾಲೇಜಿನ ಮಂಡಳಿ ಕೇರಳದವರನ್ನು ಕೆಳ ದರ್ಜೆಯವರಂತೆ ನೋಡುತ್ತಾರೆ, ಲಕ್ಷಾಂತರ ಹಣದ ಬೇಡಿಕೆ ಇಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕೇರಳದ ಗ್ರೀಷ್ಮಾ ಪ್ರಕರಣವನ್ನು ಇಟ್ಟುಕೊಂಡು ಎಲ್ಲರನ್ನು ನಿಂದಿಸುತ್ತಾರೆ.
ಅತ್ಯಂತ ಕಿರಿಯ ವಯಸ್ಸಿಗೆ ಜೀವಾವಧಿ ಶಿಕ್ಷೆ ಪಡೆದ ಅಪಖ್ಯಾತಿಗೆ ಒಳಗಾಗಿರುವ ಗ್ರೀಷ್ಮಾ, ಸದ್ಯ ಜೈಲಿನಲ್ಲಿದ್ದಾಳೆ. ತನ್ನ ಬಾಯ್ ಫ್ರೆಂಡ್ಗೆ ವಿಷವುಣಿಸಿ ಸಾವಿಗೆ ಕಾರಣಳಾದ ಸೌಂದರ್ಯ ಚೆಲುವೆ ಗ್ರೀಷ್ಮಾಳಂತೆ ಕೇಳರದಿಂದ ಬಂದ ನೀವೆಲ್ಲ ಅದೇ ರೀತಿ ಪ್ರಾಂಶುಪಾಲರಾದ ಶಾಂತಂ ಸ್ವೀಟ ರೋಸ್ ಹೀಯಾಳಿಸುತ್ತಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಹಿಂದೆಯೂ ಇದೇ ರೀತಿ ಘಟನೆಗಳಾದರೂ ಕೂಡ ಪೊಲೀಸ್ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ. ಈಗಲೂ ಅದೇ ಪರಿಸ್ಥಿತಿ ಇದೆ ಎಂಬುದು ವಿದ್ಯಾರ್ಥಿಗಳ ಅಳಲು. ಹೊರರಾಜ್ಯದಿಂದ ನಮ್ಮಲ್ಲಿಗೆ ಕರ್ನಾಟಕಕ್ಕೆ ಬರುವವರಿಗೆ ನಾವು ಉತ್ತಮ ಆತಿಥ್ಯ, ಶಿಕ್ಷಣವನ್ನು ಕೊಡಬೇಕು. ಆದರೆ ಈ ಪ್ರಕರಣದಲ್ಲಿ ಅದಾಗಿಲ್ಲ. ಈ ರೀತಿ ಆದ್ರೆ ನಮ್ಮ ರಾಜ್ಯದ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ನೆರೆಯ ರಾಜ್ಯದ ಮಂದಿ ಹೊಂದುತ್ತಾರೆ ಅಲ್ವಾ… ಈ ನಡುವೆ ಹಲವು ಕನಸು ಹೊತ್ತು ಬಂದಿದ್ದ ವಿದ್ಯಾರ್ಥಿನಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸ.
ಆಡಳಿತ ಮಂಡಳಿ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಕೇರಳ ಮೂಲದ ವೈದ್ಯ ವಿದ್ಯಾರ್ಥಿನಿ..!
RELATED ARTICLES