ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಭ ಧರಿಸಿದ್ದ ಹಸುವನ್ನು ಕೊಂದು ಮಾಂಸ ಮಾಡಿದ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣ ಸಂಬಂಧ ರಾಜ್ಯಾದ್ಯಂತ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ಈ ಸಂಬಂಧಿತವಾಗಿ ಈಗ ಮುಸ್ಲಿಂ ಸಮುದಾಯದ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಕಳ್ಳತನ ಮಾಡಿದ ಮಾಂಸ ನಮ್ಮ ಧರ್ಮದಲ್ಲಿ ಸೇವಿಸುವಂತಿಲ್ಲ. ದನಗಳ್ಳರು ಯಾರೇ ಆಗಿದ್ರೂ ಬಂಧಿಸಿ ಕ್ರಮ ಕೈಗೊಳ್ಳಲಿ. ಇದಕ್ಕೆ ನಮ್ಮ ಸಹಕಾರವಿದೆ ಎಂದು ಭಟ್ಕಳ ತಂಜೀಮ್ ಅಧ್ಯಕ್ಷ ಇಮಾಯತ್ವುಲ್ಲಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಯಾವುದೇ ಧರ್ಮದವರಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಗರ್ ಧರಿಸಿದ್ದ ಹಸುವಿನ ತಲೆ ಕಡಿದದ್ದನ್ನು ನಾನು ತೀವ್ರವಾಗಿ ಖಂಡಿಸುತ್ತೇವೆ. ಈಗಾಗಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ತಮ್ಮ ಹೆಸರಿನ ಜೊತೆಗೆ ಭಟ್ಕಳ ಅಂತ ಸೇರಿಸಿಕೊಂಡಿದ್ದಾರೆ. ಇಂಥ ನೀಚರಿಂದ ಭಟ್ಕಳದ ಹೆಸರು ಹಾಳಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಗೋಕಳ್ಳತನ ಈ ಹಿಂದೆಯೂ ನಡೆದಿತ್ತು. ಬಿಜೆಪಿ ಶಾಸಕ ದಿನಕರ ಶೆಟ್ಟಿ ಸಿಎಂ, ಮತ್ತು ಗೃಹ ಸಚಿವರ ಬಗ್ಗೆ ಲಘುವಾಗಿ ಹೇಳಿಕೆ ಕೊಡುತ್ತಿದ್ದಾರೆಂದು ಆರೋಪಿಸಿದರು. ಮಹಜರಿಗೆ ತೆರಳಿದ ಸಂದರ್ಭ ಪೊಲೀಸರ ಮೇಲೆ ಆರೋಪಿ ಹಲ್ಲೆಗೆ ಮುಂದಾದ ಬೆಳವಣಿಗೆ ಬಗ್ಗೆ ಮುಸ್ಲಿಂ ಮುಖಂಡ ಇಮ್ರಾನ್ ಲಂಕಾ ಪ್ರತಿಕ್ರಿಯಿಸಿ, ಇದರಲ್ಲಿ ಆರೋಪಿ ಮತ್ತು ಪೊಲೀಸರದ್ದು ಇಬ್ಬರದ್ದು ತಪ್ಪಿದೆ. ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಬಾರದಾಗಿತ್ತು. ಆರೋಪಿಗಳು ತಪ್ಪು ಮಾಡಿದಕ್ಕೆ ಅನಿವಾರ್ಯವಾಗಿ ಪೊಲೀಸರು ಗುಂಡು ಹಾರಿಸಬೇಕಾಯ್ತು ಎಂದಿದ್ದಾರೆ.
ಗೋಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈವರೆಗೆ ೪೦೦ಕ್ಕೂ ಅಧಿಕ ಜನರನ್ನು ವಿಚಾರಣೆಗೊಳಪಡಿಸಿದ್ದಾರೆ. ಇಬ್ಬರನ್ನು ಬಂಧಿಸಿದ್ದು, ಪ್ರಮುಖ ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ. ಆರೋಪಿಗಳನ್ನು ಗರ್ಭದ ಹಸುವನ್ನು ಕೊಂದು ಮಾಂಸ ಮಾಡಿ ಕಾರ್ಯಕ್ರಮವೊಂದಕ್ಕೆ ಮಾರಾಟ ಮಾಡಿದ್ದರು ಎಂಬ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ.
