ಕೊಪ್ಪಳ : ಕೆಲವು ದಿನದ ಹಿಂದೆ ತಪ್ಪಾಗಿ ಕನ್ನಡ ಬರೆದಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸುದ್ದಿಯಾಗಿದ್ದರು. ಶುಭವಾಗಲಿ ಅಂತ ಕಪ್ಪು ಹಲಗೆ ಮೇಲೆ ಬರೆಯಲು ಹೋಗಿ ಶಬವಾಗಲಿ ಅಂತ ಬರೆದಿದ್ದ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಮಾತ್ರವಲ್ಲ ಸಚಿವರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಇದೀಗ ಈ ವಿಚಾರವಾಗಿ ಅವರು ಮೌನ ಮುರಿದಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಸುಳೇಕಲ್ನಲ್ಲಿ ಮಾತನಾಡಿದ ಅವರು, ನಾನು ಬಿಎಸ್ಸಿ ಪದವೀಧರ. ಕನ್ನಡ ಬರೆಯಲು ಬರದೇ ಇರುವಷ್ಟು ದಡ್ಡ ನಾನಲ್ಲ. ಪೂರ್ತಿ ಬರೆಯುವವರೆಗೂ ಕಾಯುವ ತಾಳ್ಮೆ ಇಲ್ಲದವರು ವಿಡಿಯೋ ಹರಿಬಿಟ್ಟಿದ್ದಾರೆ ಎಂದು ತೇಪೆ ಹಚ್ಚಿದ್ದಾರೆ.
ಕೆಲ ದಿನಗಳ ಹಿಂದೆ ಕಾರಟಗಿ ಶಾಲೆಗೆ ಭೇಟಿ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಬೋರ್ಡ್ ಮೇಲೆ ಶುಭವಾಗಲಿ ಎಂದು ತರೆಯಲು ತಡಬಡಾಯಿಸಿ ಶಬವಾಗಲಿ ಎಂದು ಬರೆದಿದ್ದು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ನಾನು ಬೇರೆ ಏನೋ ಬರೆಯಲು ಮುಂದಾಗಿದ್ದೆ. ಅಲ್ಲಿದ್ದವರು ಶುಭವಾಗಲಿ ಅಂತ ಬರೆಯಲು ಹೇಳಿದರು. ಆಗ ಭ ಅಕ್ಷರದಲ್ಲಿ ಸ್ವಲ್ಪ ತಪ್ಪಾಗಿತ್ತು. ಆದರೆ, ಅಕ್ಷರ ಬರೆಯಲಾರದ ಸ್ಥಿತಿಯಲ್ಲಿ ನಾನಿಲ್ಲ. ನನ್ನ ಬಗ್ಗೆ ಮಾತನಾಡೋರು ನನ್ನ ತಾಳ್ಮೆ ಪರೀಕ್ಷೆ ಮಾಡಬೇಡಿ. ಕಳೆದ ಹನ್ನೆರಡು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಎಂದಾದರೂ ಕನ್ನಡ ತಪ್ಪಾಗಿ ಮಾತನಾಡಿದ್ದೇನಾ? ಯಾವುದಾದರೂ ಹೆಸರನ್ನು ತಪ್ಪಾಗಿ ಹೇಳಿದ್ದೇನಾ? ಸ್ಪಷ್ಟವಾಗಿ ಕನ್ನಡದಲ್ಲಿಯೇ ಭಾಷಣ ಮಾಡುತ್ತೇನೆ. ನನ್ನ ಸಾಮರ್ಥ್ಯವನ್ನು ನೋಡಿ ಮಾತನಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಎರಡು ವರ್ಷ ಇಲಾಖೆಯನ್ನು ಹೇಗೆ ನಿಭಾಯಿಸಿದ್ದೇನೆ ಅಂತ ನೋಡಿ. ನನ್ನ ಕಾರ್ಯನಿರ್ವಹಣೆ ಬಗ್ಗೆ ಸಾಹಿತಿಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಬಗ್ಗೆ ಏನು ಸಿಗ್ತಿಲ್ಲಾ ಅಂತ ಅಸಹಾಯಕರಾಗಬೇಡಿ ಎಂದು ತಂಗಡಗಿ ಹೇಳಿದ್ದಾರೆ.
