ಬೆಂಗಳೂರು : ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಆಂತರಿಕ ಶೀತಲ ಸಮರ ಮುಂದುವರೆದಿದೆ. ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿಸುವ ವಿಚಾರದಲ್ಲಿ ಶುರುವಾದ ಶೀತಲ ಸಮಯ ಇಂದಿಗೂ ಬೇರೆ ಬೇರೆ ವಿಚಾರದಲ್ಲಿ ಮುಂದುವರೆದಿದೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಹಲವು ವಿಧೇಯಕವನ್ನು ಸರ್ಕಾರ ಮಂಡಿಸಿತ್ತು. ಅದರಲ್ಲಿ ಕರ್ನಾಟಕ ಹಿಂದೂ ಧಾರ್ಮಿಕಸಂಸ್ಥೆಗಳು ಮತ್ತು ಮುಜರಾಯಿ ವಿಧೇಯಕ ಸೇರಿದಂತೆ ನಾಲ್ಕು ವಿಧೇಯಕಗಳಿಗೆ ಅನುಮೋದನೆ ನೀಡದೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ.
ಕರ್ನಾಟಕ ಮಿನರಲ್ಸ್ ಹಕ್ಕು ಮತ್ತು ಬೇರಿಂಗ್ ಲ್ಯಾಂಡ್ ಟ್ಯಾಕ್ಸ್ ಬಿಲ್ 2024, ಕರ್ನಾಟಕ ಹಿಂದೂ ಧಾರ್ಮಿಕಸಂಸ್ಥೆಗಳು ಮತ್ತು ಮುಜರಾಯಿ ವಿಧೇಯಕ 2024, ಕರ್ನಾಟಕ ಸಹಕಾರಿ ಸೊಸೈಟಿಗಳ ತಿದ್ದುಪಡಿ ವಿಧೇಯಕ 2024, ಮತ್ತು ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ 2024 ಅಂಗೀಕಾರವಾಗಿತ್ತು. ಅನುಮೋದನೆಗಾಗಿ ರಾಜ್ಯಪಾಲರ ಕಚೇರಿಗೆ ಸರ್ಕಾರ ಕಳುಹಿಸಿತ್ತು. ಇದರ ಬಗ್ಗೆ ಸ್ಪಷ್ಟನೆ ಕೋರಿರುವ ರಾಜ್ಯಪಾಲರು ಅದನ್ನು ರಾಜ್ಯ ಸರ್ಕಾರಕ್ಕೆ ವಾಪಸ್ಸು ಕಳುಹಿಸಿದ್ದಾರೆ.
ಇದು ರಾಜ್ಯ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ಸರ್ಕಾರ ಮುಂದಾಗಿದೆ ಅಂತ ತಿಳಿದುಬಂದಿದೆ. ಕಾನೂನಾತ್ಮಕವಾಗಿ ಸರ್ಕಾರ ಇದನ್ನು ಮುಂದುವರೆಸುತ್ತೆ?. ಇನ್ಯಾವ ಹಂತಕ್ಕೆ ಈ ಸಮರ ಹೋಗುತ್ತೆ ಅನ್ನೋದು ಸದ್ಯದ ಕುತೂಹಲ.
