Dwarakish; ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ರವರು ಹೃದಯಘಾತದಿಂದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 19 ಆಗಸ್ಟ್ 1942 ರಂದು ಮೈಸೂರಿನ ಹುಣಸೂರಿನಲ್ಲಿ ಜನಿಸಿದ ದ್ವಾರಕೀಶ್ ರವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶಾರದ ವಿಲಾಸ ಮತ್ತು ಬನುಮಯ್ಯ ಅವರ ಶಾಲೆಯಲ್ಲಿ ಪಡೆದರು. ಬಳಿಕ ಸಿಪಿಸಿ ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾವನ್ನು ಪಡೆದು, ನಂತರ ಭಾರತ್ ಆಟೋ ಸ್ಪೇರ್ ಸ್ಟೋರ್ ವ್ಯವಹಾರ ಆರಂಭಿಸಿದರು.
1963ರಲ್ಲಿ ವ್ಯಾಪಾರ ದಾರಿ ಬಿಟ್ಟು ಕನ್ನಡ ಸಿನಿಮಾ ಕಡೆ ವಾಲಿದರು. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ತಮ್ಮದೇ ಶೈಲಿಯಲ್ಲಿ ಅಭಿಮಾನಿಗಳನ್ನು ರಂಜಿಸುತ್ತಾ ಬಂದರು. ಕನ್ನಡ ಚಿತ್ರರಂಗಕ್ಕೆ ಇವರು ಸಲ್ಲಿಸಿದ ಸೇವೆಗೆ ಬೆಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ನಟರಾಗಿ ಮಾತ್ರವಲ್ಲದೇ ನಿರ್ದೇಶಕ, ನಿರ್ಮಾಪಕರಾಗಿ ಹಲವಾರು ಸಿನಿಮಾಗಳಿಗೆ ತಮ್ಮ ಕೊಡುಗೆ ನೀಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಬರೋಬ್ಬರಿ 40ಕ್ಕೂ ಹೆಚ್ಚು ಸಿನಿಮಾಗಳ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಜನತೆಯ ರಾಜಕುಳ್ಳ ದ್ವಾರಕೀಶ್ ಅಗಲಿಕೆಗೆ ನಾಡಿನ ಸಿನಿಮಾ ತಾರೆಯರು, ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
