ಚಿಕ್ಕಮಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಮರದ ರೀಪರ್ ತುಂಬಿದ್ದ ಲಾರಿ ಪಲ್ಟಿಯಾದರೂ ಕಾರಿನಲ್ಲಿದ್ದ ಮೂವರು ಅದೃಷ್ಟವಶಾತ್ ಪವಾಡ ಸದೃಶ್ಯದಂತೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಕ್ರಾಸ್ ಬಳಿ ನಡೆದಿದೆ. ಕಾರಿನಲ್ಲಿದ್ದ ಪ್ರಭಾಕರ್, ನಳಿನ ಹಾಗೂ ನೇಹಾ ಗಾಯಾಳುಗಳು ಚಿಕ್ಕಮಗಳೂರು ನಗರದ ಕಲ್ಯಾಣನಗರದ ನಿವಾಸಿಗಳು.

ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ರಾಷ್ಟ್ರೀಯ ಹೆದ್ದಾರಿ 173ರ ಮೂಲಕ ಕಡೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿತ್ತು. ಮರದ ರೀಪರ್ ತುಂಬಿದ್ದ ಲಾರಿ ಚಿಕ್ಕಮಗಳೂರು ನಗರದಿಂದ ಕಡೂರು ಕಡೆ ಹೊರಟಿತ್ತು. ಲಕ್ಯಾ ಕ್ರಾಸ್ ಬಳಿ ಕಾರಿನ ಮೇಲೆ ಲಾರಿಯಲ್ಲಿದ್ದ ರೀಪರ್ ಸಂಪೂರ್ಣ ಕುಸಿದು ಬಿದ್ದಿದ್ದು ಕಾರು ಮರದ ರೀಪರ್ ನಿಂದ ಮುಚ್ಚಿಹೋಗಿದೆ. ಆದರೂ ಕಾರಿನಲ್ಲಿದ್ದ ದಂಪತಿ, ಬಾಲಕಿ ಸೇರಿ ಮೂವರು, ಸ್ಥಳೀಯರ ಸಹಾಯದೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಆದರೆ, ಲಾರಿಯ ಚಾಲಕ ಹಾಗೂ ಕ್ಲೀನರ್ ಬೆನ್ನಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ರವಾನಿಸಲಾಗಿದೆ. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರದ ರೀಪರ್ ತುಂಬಿದ್ದ ಲಾರಿಗಳಿಗೆ ಚಾಲಕರು ಟಾರ್ಪಲ್ ಮುಚ್ಚುವುದಿಲ್ಲ. ಲಾರಿ ಹೋಗುವಾಗ ಗಾಳಿಗೆ ಮರದ ರೀಪರ್ ಪುಡಿ ಹಾರುವುದರಿಂದ ಲಾರಿ ಹಿಂದೆ ಬರುವ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.


