ಧರ್ಮಸ್ಥಳ:ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ದಾಖಲಾಗಿರುವ ಮಹಿಳೆಯರ ನಾಪತ್ತೆ ಮತ್ತು ಅನಾಥ ಶವಗಳ ಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸದಾಗಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 23ಕ್ಕೆ ಮುಂದೂಡಿದೆ.
ಸೌಜನ್ಯ ತಾಯಿಯಿಂದ ಅರ್ಜಿ ಸಲ್ಲಿಕೆ
ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಯುವತಿ ಸೌಜನ್ಯ ಅವರ ತಾಯಿ ಕುಸುಮವತಿ ಗೌಡ ಅವರು ಈ ಹೊಸ ಅರ್ಜಿಯನ್ನು ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಈ ಪ್ರಕರಣವು ವಿಚಾರಣೆಗೆ ಬಂದಿತ್ತು. ಆದರೆ, ವಿಚಾರಣೆ ಸಮಯದಲ್ಲಿ ವಕೀಲರ ಅನುಪಸ್ಥಿತಿಯ ಕಾರಣದಿಂದಾಗಿ ಪೀಠವು ವಿಚಾರಣೆಯನ್ನು ಮುಂದೂಡಲು ನಿರ್ಧರಿಸಿತು.
74 ಅನಾಥ ಶವಗಳು ಮತ್ತು ನಾಪತ್ತೆ ಪ್ರಕರಣಗಳ ತನಿಖೆಗೆ ಆಗ್ರಹ
ನೇತ್ರಾವತಿ ನದಿ ದಡದಲ್ಲಿ ಸುಮಾರು 74 ಅನಾಥ ಶವಗಳನ್ನು ಹೂತುಹಾಕಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 74 ಮಹಿಳೆಯರ ನಾಪತ್ತೆ ಪ್ರಕರಣಗಳು ಮತ್ತು ಈ ಅನಾಥ ಶವಗಳ ಪತ್ತೆ ಪ್ರಕರಣಗಳ ನಡುವೆ ಸಂಬಂಧವಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಪ್ರತಿಯೊಂದು ಪ್ರಕರಣಕ್ಕೂ ಪ್ರತ್ಯೇಕ ಎಫ್ಐಆರ್ (FIR) ದಾಖಲಿಸಿ ತನಿಖೆ ನಡೆಸುವ ಮೂಲಕ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಕುಸುಮವತಿ ಗೌಡ ಅವರು ಆಗ್ರಹಿಸಿದ್ದಾರೆ.
‘ಮಾಸ್ಕ್ ಮ್ಯಾನ್’ ಹೇಳಿಕೆ ಬಗ್ಗೆ ತನಿಖೆಗೆ ಒತ್ತಾಯ
ಸುಮಾರು ಎರಡು ವರ್ಷಗಳ ಕಾಲ ನೂರಾರು ಅನಾಥ ಶವಗಳನ್ನು ಹೂತುಹಾಕಿದ್ದಾಗಿ ಈ ಹಿಂದೆ ಹೇಳಿಕೆ ನೀಡಿದ್ದ ‘ಮಾಸ್ಕ್ ಮ್ಯಾನ್’ ಖ್ಯಾತಿಯ ಚಿನ್ನಯ್ಯ ಅವರು ನಂತರ ತಮ್ಮ ಹೇಳಿಕೆಯನ್ನು ಬದಲಿಸಿದ್ದರು. ಅವರು ಈ ರೀತಿ ಉಲ್ಟಾ ಹೊಡೆದಿದ್ದೇಕೆ? ಅವರ ಮೇಲೆ ಯಾವುದಾದರೂ ಒತ್ತಡವಿತ್ತೇ? ಎಂಬ ಬಗ್ಗೆಯೂ ಆಳವಾದ ತನಿಖೆಯಾಗಬೇಕು ಎಂದು ಅರ್ಜಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.
