ಪೊನ್ನಂಪೇಟೆ(ಕೊಡಗು) : ಖಾಸಗಿ ಬಸ್ ಅನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ನಡೆದಿದೆ. ಖಾಸಗಿ ಬಸ್ ಅನ್ನು ಓವರ್ ಟೇಕ್ ಮಾಡಿದ್ದಕ್ಕಾಗಿ ಘಟನೆ ನಡೆದಿದೆ ಎನ್ನಲಾಗಿದೆ.
ಸರ್ಕಾರಿ ಬಸ್ ಅನ್ನು ಅಡ್ಡಗಟ್ಟಿದ ಖಾಸಗಿ ಬಸ್ ಚಾಲಕ ಹಾಗೂ ನಿರ್ವಾಹಕ ಸಿನಿಮೀಯ ಮಾದರಿಯಲ್ಲಿ ಹಲ್ಲೆ ನಡೆಸಿದ್ದಾರೆ. ಖಾಸಗಿ ಬಸ್ ಚಾಲಕ ದೂರದಿಂದ ಓಡಿ ಬಂದು ಸರ್ಕಾರಿ ಬಸ್ ಚಾಲಕ ಯಶವಂತ ಎಂಬವರ ಹೊಟ್ಟೆಯ ಕೆಳಭಾಗಕ್ಕೆ ಒದೆಯುತ್ತಾನೆ. ಬಳಿಕ ನಿರ್ವಾಹಕ ಆತನನ್ನು ಎಳೆದಾಡಿ ಹೊಡೆಯುವುದಲ್ಲದೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ. ಈ ಪ್ರಸಂಗವನ್ನು ಅಲ್ಲಿದ್ದ ಸಾರ್ವಜನಿಕರೊಬ್ಬರು ವೀಡಿಯೋ ಮಾಡಿದ್ದಾರೆ.
ಘಟನೆ ಬಗ್ಗೆ ಕೆಎಸ್ಆರ್ಟಿಸಿ ಬಸ್ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿ ಆದರೆ ನಮಗೆ ಸುರಕ್ಷತೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಘಟನೆಯಿಂದ ಹಲ್ಲೆಗೊಳಗಾದ ಸರ್ಕಾರಿ ಬಸ್ ಚಾಲಕನಿಗೆ ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.




