ಕನ್ನಡ ಮತ್ತು ತೆಲುಗು ಸೀರಿಯಲ್ ಗಳಲ್ಲಿ ನಟಿಸುತ್ತಿದ್ದ ಪವಿತ್ರಾ ಜಯರಾಮ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರಿಗೆ 35 ವರ್ಷವಾಗಿತ್ತು. ಇವರು ಮೂಲತಃ ಮಂಡ್ಯದ ಹನಕೆರೆಯವರು. ತೆಲುಗು ಭಾಷೆಯ ತ್ರಿನಯಿನಿ ಸೀರಿಯಲ್ ಮೂಲಕವೇ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದ ಪವಿತ್ರಾ, ಭಾನುವಾರ ಬೆಳಗ್ಗೆ ಆಂಧ್ರ ಪ್ರದೇಶದ ಮೆಹಬೂಬ ನಗರದ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಈ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ, ಪವಿತ್ರ ಜಯರಾಮ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹುಟ್ಟೂರು ಮಂಡ್ಯಗೆ ಆಗಮಿಸುತ್ತಿದ್ದಾಗ ಅಪಘಾತ
ಆಂಧ್ರಪ್ರದೇಶದ ಕರ್ನೂಲು ಸಮೀಪ ಇವರ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಹೈದರಾಬಾದ್ನಿಂದ ವನಪರ್ತಿಗೆ ಬರುತ್ತಿದ್ದ ಬಸ್ ,ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪವಿತ್ರಾ ಜಯರಾಮ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪವಿತ್ರ ಜೊತೆ ಕಾರಿನಲ್ಲಿ ಅವರ ಸೋದರ ಸಂಬಂಧಿ ಅಪೇಕ್ಷಾ, ಚಾಲಕ ಶ್ರೀಕಾಂತ್ ಮತ್ತು ಸಹ ನಟ ಚಂದ್ರಕಾಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕನ್ನಡದ ಸೀರಿಯಲ್ ಗಳಲ್ಲಿಯೂ ಛಾಪು ಮೂಡಿಸಿದ್ದ ನಟಿ
ಪವಿತ್ರಾ ಜಯರಾಮ್ ತೆಲುಗಿನಿ ಬ್ಲಾಕ್ ಬಸ್ಟರ್ ಹಿಟ್ ತ್ರಿನಯನಿ ಸೀರಿಯಲ್ ನಟಿಸುತ್ತಿದ್ದರು. ಈ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಜೀ ಕನ್ನಡದಲ್ಲೂ ಪ್ರಸಾರವಾಗುತ್ತಿತ್ತು. ಈ ಸೀರಿಯಲ್ಗೂ ಮುನ್ನ ಕನ್ನಡದ ಹಲವು ಧಾರಾವಾಹಿಗಳಲ್ಲೂ ಪವಿತ್ರ ಕಾಣಿಸಿಕೊ೦ಡು ಕನ್ನಡಿಗರ ಮನೆಮಾತಾಗಿದ್ದರು. ಪವಿತ್ರ , ಜೋಕಾಲಿ, ರೋಬೋ ಫ್ಯಾಮಿಲಿ, ರಾಧಾ ರಮಣ, ನೀಲಿ ಸೀರಿಯಲ್ ಗಳಲ್ಲಿಯೂ ನೈಜವಾಗಿ ನಟಿಸಿ ಎಲ್ಲರ ಮನಗೆದ್ದಿದ್ದರು. ವಿಷಯ ತಿಳಿಯುತ್ತಿದ್ದಂತೆ ತ್ರಿನಯನಿ ಸೀರಿಯಲ್ ಟೀಮ್ ಕಂಬನಿ ಮಿಡಿಯುತ್ತಿದೆ.ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪವಿತ್ರರ ಫೋಟೋ ಶೇರ್ ಮಾಡಿ,ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಾಂತ್ವನ ಹೇಳುತ್ತಿದ್ದು, ಸಂತಾಪ ಸೂಚಿಸುತ್ತಿದ್ದಾರೆ.