ಉತ್ತರ ಕನ್ನಡ : ಜುಲೈ 16 ರಂದು ಅಂಕೋಲಾ ತಾಲೂಕಿನ ಶಿರೂರು ಬಳಿ ಸಂಭವಿಸಿದ್ದ ಭೂಕುಸಿತದಲ್ಲಿ ಕಣ್ಮರೆಯಾಗಿದ್ದ ವಾಹನಗಳ ಪೈಕಿ ಎರಡು ವಾಹನಗಳು ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜುಲೈ 16 ರಂದು ಗುಡ್ಡ ಕುಸಿದು 11 ಜನ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದರು. 8 ಜನರ ಮೃತದೇಹ ಸಿಕ್ಕಿತ್ತು, ಉಳಿದ ಮೂವರು ಈವರೆಗೆ ಪತ್ತೆಯಾಗಿಲ್ಲ. ಕೇರಳದ ಲಾರಿ ಚಾಲಕ ಅರ್ಜುನ್, ಸ್ಥಳೀಯರಾದ ಲೋಕೇಶ್ ನಾಯ್ಕ, ಜಗನ್ನಾಥ ನಾಯ್ಕ ಎಂಬವರು ಈವರೆಗೂ ಸಿಕ್ಕಿಲ್ಲ. ಮೂರನೇ ಹಂತದ ಶೋಧಕಾರ್ಯ ಗಂಗಾವಳಿ ನದಿಯಲ್ಲಿ ನಡೆಯುತ್ತಿದ್ದು, ಈ ವೇಳೆ ವಾಹನಗಳು ಪತ್ತೆಯಾಗಿದೆ.
ಗೋವಾದಿಂದ ಡ್ರೆಜರ್ ತರಿಸಿ ಶೋಧಕಾರ್ಯ ನಡೆಯುತ್ತಿದೆ. ಉಡುಪಿಯ ಮುಳುಗುತಜ್ಞ ಈಶ್ವರ್ ಮಲ್ಪೆ ತಂಡ ನದಿಯಲ್ಲಿ ಮುಳುಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಂದು ಕಾರ್ಯಾಚರಣೆಯಲ್ಲಿದ್ದ ಸಂದರ್ಭ ನದಿಯಲ್ಲಿ 2 ವಾಹನಗಳು ಪತ್ತೆಯಾಗಿದೆ. ಅದು ಯಾರಿಗೆ ಸಂಬಂಧಿಸಿದ ವಾಹನ ಎಂಬುದು ಗುರುತು ಸಿಕ್ಕಿಲ್ಲ. ಅವುಗಳನ್ನು ಮೇಲೆತ್ತುವ ಕಾರ್ಯ ಪ್ರಗತಿಯಲ್ಲಿದೆ.




