ದಕ್ಷಿಣ ಕನ್ನಡ: ಧರ್ಮಸ್ಥಳದ ಅರಣ್ಯದಲ್ಲಿ ಅನಾಮಿಕ ವ್ಯಕ್ತಿಯ ಬುರುಡೆ ರಹಸ್ಯ ಬಿಚ್ಚಿಡುವ ಕಾರ್ಯಾಚರಣೆ ಮುಂದುವರೆದಿದೆ. ಕಳೆದ 15 ದಿನಗಳಿಂದ ವಿಚಾರಣೆ, ಸಮಾಧಿ ಶೋಧ ನಡೆಯುತ್ತಾ ಬಂದಿದ್ದು, ಶುಕ್ರವಾರ ಧಿಡೀರ್ 15ನೇ ಪಾಯಿಂಟ್ನಲ್ಲಿ ಶೋಧಕಾರ್ಯ ನಡೆಯಿತು. 5 ಗಂಟೆಗಳ ಕಾಲಹರಣ ಬಿಟ್ಟರೆ ಸಮಾಧಿ ಒಳಗೆ ಸಿಕ್ಕಿದ್ದು ಬರೀ ಮಣ್ಣು.
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದೇನೆ ಎಂಬ ಅನಾಮಿಕನ ವಿಚಾರಣೆ ಮತ್ತು ಸ್ಥಳಶೋಧ ಕಾರ್ಯ ಮುಂದುವರೆಯಿತು. ನೇತ್ರಾವತಿ ನದಿ ತೀರದ ಬಂಗ್ಲೆಗುಡ್ಡೆಯ ಕಾರ್ಯಾಚರಣೆ ಮುಗಿದಿದ್ದು ಶುಕ್ರವಾರ ಅಧಿಕಾರಿಗಳ ತಂಡ ಬೊಳಿಯಾರ್ಗೆ ಬಂದು ಇಳಿಯಿತು. ಮಧ್ಯಾಹ್ನ ಒಂದು ಗಂಟೆಗೆ ಮುಸುಕುಧಾರಿ ಮತ್ತು 40 ಅಧಿಕಾರಿಗಳು ಹಾಗೂ ಪೊಲೀಸರ ತಂಡ ಕಾಡು ಪ್ರವೇಶಿಸಿತು. ನಂತರ ಶುರುವಾಗಿದ್ದೇ ತಲೆ ಬುರುಡೆಗಳ ತಲಾಶ್ ಕಾರ್ಯ
ಕಾಡಿನಲ್ಲಿ ಸುಮಾರು ಐದು ಗಂಟೆಗಳ ಕಾರ್ಯಾಚರಣೆಯ ನಂತರ ಎಸ್ಐಟಿ (SIT) ಅಧಿಕಾರಿಗಳಿಗೆ ಸಿಕ್ಕಿದ್ದು ಬರೀ ಮಣ್ಣು ಮಾತ್ರ. ಆರು ಅಡಿಗಿಂತ ಆಳಕ್ಕೆ ಹೋದ ತಂಡ ಇಲ್ಲೇನು ಇಲ್ಲ ಎಂದು ನಿರ್ಧರಿಸಿಬಿಟ್ಟಿತು. ಮಾಸ್ಕ್ ಮ್ಯಾನ್ ಮತ್ತೆ ಕನ್ಫ್ಯೂಷನ್ ಆಗಿ ಬೇರೆಬೇರೆ ಜಾಗ ತೋರಿಸಿದ. ಅಲ್ಲಿ ಇಲ್ಲಿ ಕಾಡಿನಲ್ಲಿ ಸುತ್ತಾಡಿ ಪರಿಶೀಲಿಸಿ ತಂಡ ವಾಪಸ್ ಬಂದಿದೆ.