ಚಿಕ್ಕಮಗಳೂರು : ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಚಿಕ್ಕಮಗಳುರಿನ ಯೋಗಗುರುವೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಕೇವಲ ಫೌಂಡೇಷನ್ ಹೆಸರಿನಲ್ಲಿ ಯೋಗ ತರಬೇತಿ ನೀಡುತ್ತಿದ್ದ ಯೋಗ ಗುರು ಪ್ರದೀಪ್ ಉಲ್ಲಾಳ್(53) ಬಂಧಿತ ಆರೋಪಿ. ಪಂಜಾಬ್ ಮೂಲದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಪ್ರದೀಪ್ನನ್ನು ಭಾನುವಾರ ಬೆಳಗ್ಗೆ ನಗರದಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಎಸ್ಐ ಸಚಿನ್ ಮತ್ತು ತಂಡದವರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಏನಿದು ಪ್ರಕರಣ..? ದೂರಿನಲ್ಲಿ ಏನಿದೆ..?
ಮಲ್ಲೇನಹಳ್ಳಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೇವಲ ಫೌಂಡೇಷನ್ ಮೂಲಕ ಪ್ರದೀಪ್ ಯೋಗ ತರಬೇತಿ ನೀಡುತ್ತಿದ್ದರು. ಇಲ್ಲಿಗೆ ದೇಶ, ವಿದೇಶದ ಅನೇಕ ಮಂದಿ ಬಂದು ಯೋಗ ಶಿಕ್ಷಣ ಪಡೆಯುತ್ತಿದ್ದರು. ಆನ್ಲೈನ್ ಮೂಲಕವೂ ಯೋಗ ತರಬೇತಿ ನೀಡಲಾಗುತ್ತಿತ್ತು.
ಪಂಜಾಬ್ ಮೂಲದ ವೈದ್ಯರೊಬ್ಬರು 2020ರಲ್ಲಿ ಅಮೇರಿಕಾದಲ್ಲಿ ವೃತ್ತಿಯಲ್ಲಿದ್ದ ಸಂದರ್ಭ ಅವರ ಸ್ನೇಹಿತರಿಂದ ಕೇವಲ ಯೋಗ ಕೇಂದ್ರದ ಬಗ್ಗೆ ಮಾಹಿತಿ ಸಿಗುತ್ತದೆ. ಅದರಂತೆ ಅಲ್ಪ ಹಣ ನೀಡಿ ಆನ್ಲೈನ್ ತರಗತಿಗೆ ಸೇರಿಕೊಳ್ಳುತ್ತಾರೆ.
ನಂತರ ಇಲ್ಲಿಗೆ ಬಂದು ತರಗತಿಯಲ್ಲಿ ಪಾಲ್ಗೊಳ್ಳುವಂತೆ ಪ್ರದೀಪ್ ಹೇಳುತ್ತಾನೆ. ಆ ಪ್ರಕಾರ ಚಿಕ್ಕಮಗಳೂರಿಗೆ ಬಂದು ಆತನ ಕೇಂದ್ರಕ್ಕೆ ಭೇಟಿ ನೀಡಿ 20 ದಿನ ತರಗತಿಯಲ್ಲಿ ಭಾಗಿಯಾಗುತ್ತಾರೆ. ಈ ವೇಳೆ ಆ ವೈದ್ಯೆಯ ಜತೆಗೆ ಸಲುಗೆ ಬೆಳೆಸಿಕೊಂಡು ಇಬ್ಬರು ಕೂಡಾ ಆತ್ಮೀಯರಾಗುತ್ತಾರೆ. ದೈಹಿಕವಾಗಿಯೂ ಆಕೆಯನ್ನು ಬಳಸಿಕೊಳ್ಳುತ್ತಾನೆ ಪ್ರದೀಪ್.
ನಂತರ 2020-21ರಲ್ಲೂ ಇಲ್ಲಿಗೆ ಬಂದು ಯೋಗ ತರಗತಿಯಲ್ಲಿ ಆಕೆ ಭಾಗಿಯಾಗುತ್ತಾಳೆ. ಯೋಗದ ಜತೆಗೆ ದೈಹಿಕ ಸಂಬಂಧವೂ ಮುಂದುವರೆಯುತ್ತದೆ. ಈ ನಡುವೆ ಆತ ಇತರರ ಜತೆಗೂ ಇದೇ ರೀತಿ ಸಂಬಂಧ ಹೊಂದಿದ್ದಾನೆಂಬುದು ಆಕೆಗೆ ಗೊತ್ತಾಗುತ್ತೆ. ಏಕಾಏಕಿ ರೊಚ್ಚಿಗೇಳುವ ವೈದ್ಯೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡುತ್ತಾಳೆ. ಆತ ನನ್ನ ನಂಬಿಕೆಗೆ ದ್ರೋಹ ಮಾಡಿದ್ದಾನೆ. ಬಲವಂತವಾಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಅಂತ ಆರೋಪಿಸಿದ್ದಾಳೆ. ಇದರ ಆಧಾರದಲ್ಲಿ ಆರೋಪಿಪಯನ್ನು ಬಂಧಿಸಲಾಗಿದೆ.
ಇಬ್ಬರು ಆಪ್ತವಾಗಿರುವ ಕೆಲವು ಫೋಟೋಗಳು ಬಹಿರಂಗವಾಗಿದ್ದು, ಇಬ್ಬರು ಕೂಡಾ ಸಲುಗೆಯಿಂದ ಇರುವುದು ತಿಳಿಯುತ್ತದೆ. ಅದಕ್ಕೂ ಮೇಲಾಗಿ 2020ರಿಂದಲೂ ದೈಹಿಕವಾಗಿ ಸಂಬಂಧ ಹೊಂದಿ, ಈಗ ದೂರು ನೀಡಿರುವುದರ ಹಿಂದೆಯೂ ಹಲವು ಅನುಮಾನಗಳು ಮೂಡುತ್ತಿದೆ. ಪೊಲೀಸರ ತನಿಖೆ ಮೂಲಕ ಆ ಅನುಮಾನಗಳಿಗೆ ಉತ್ತರ ಸಿಗಬೇಕಿದೆ.


