ಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಹೋಬಳಿಯ ವಿವಿಧೆಡೆ ಮಳೆ ಆರ್ಭಟ ಜೋರಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾನುವಾರ ಮಘೆ ಮಳೆ ಆರಂಭಗೊಂಡಿದ್ದು ಮೊದಲ ದಿನವೇ ಬಿರುಸಿನ ಮಳೆಯಾಗಿದೆ. ಇದೀಗ ಮಘೆ ಮಳೆಯು ಮೊದಲ ದಿನವೇ ಬಿಟ್ಟು ಬಿಡದೆ ಸುರಿದಿದ್ದರಿಂದ ಭದ್ರಾ ನದಿಯು ಮೈದುಂಬಿ ಹರಿಯುತ್ತಿದೆ.
ನೀರಿನ ಹರಿವು ಅಪಾಯದಮಟ್ಟ ಮೀರಿದ್ದು ನದಿಯ ಪಾತ್ರದ ಕೆಲವು ತೋಟ, ಗದ್ದೆಗಳಿಗೆ ನೀರು ನುಗ್ಗಿದೆ. ಹಲವು ಕಡೆಗಳಲ್ಲಿ ಕೆಲವು ದಿನಗಳ ಹಿಂದಷ್ಟೆ ನಾಟಿ ಮಾಡಿದ್ದ ಭತ್ತದ ಸಸಿಗಳು ಭದ್ರಾ ನದಿಯ ನೀರಿನ ಸೆಳೆತಕ್ಕೆ ಸಿಲುಕಿವೆ. ಭದ್ರಾ ನದಿಯ ಸುತ್ತಮುತ್ತಲೂ ಇರುವ ಸಣ್ಣಪುಟ್ಟ ಹಳ್ಳಗಳೂ ತುಂಬಿ ಹರಿಯುತ್ತಿವೆ. ಭಾರಿ ಮಳೆಯೊಂದಿಗೆ ಕೆಲವೊಮ್ಮೆ ಗಾಳಿಯೂ ಬೀಸುತ್ತಿದ್ದು ಕೆಲವು ಕಡೆಗಳಲ್ಲಿ ಮರಗಳು ಬಿದ್ದಿವೆ.
ಕಳಸ ತಾಲೂಕಿನಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದ್ದು, ನದಿ ಪಾತ್ರಗಳು ಜಲಾವೃತವಾಗಿ ಭದ್ರಾ ನದಿ ತುಂಬಿ ಹರಿಯುತ್ತಿದೆ. ಶನಿವಾರ ಸಂಜೆಯಿಂದ ಮಳೆಯ ಬಿರುಸು ಹೆಚ್ಚಾಗಿದ್ದು ರಾತ್ರಿ ವೇಳೆ ಗುಡುಗಿನೊಂದಿಗೆ ಮಳೆ ಸುರಿದಿದೆ. ಹೆಬ್ಬಾಳೆಯ ಹಳೇ ಸೇತುವೆ ಮುಳುಗಡೆಯಾಗಿ ನದಿ ಪಾತ್ರಗಳು ಜಲಾವೃತವಾಗಿವೆ. ನದಿಯಲ್ಲಿ ಈ ವರ್ಷದ ಗರಿಷ್ಠ ಮಟ್ಟದ ನೀರು ಹರಿದಿದೆ.
