ಬಾಳೆಹೊನ್ನೂರು: ಕಾಡಾನೆ ದಾಳಿಯಿಂದ ಕೂಲಿ ಕಾರ್ಮಿಕ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ನಡೆದಿದೆ.
ಹೌದು .. ಮೃತರನ್ನ ಯಲ್ಲಪ್ಪ (45) ಎಂದು ಗುರುತಿಸಲಾಗಿದೆ. ಮೃತ ಯಲ್ಲಪ್ಪ ಮೂಲತಃ ಹಾವೇರಿ ಜಿಲ್ಲೆ ಹಾನಗಲ್ ಸಮೀಪದ ತಿರುವಳ್ಳಿ ಮೂಲದವರು. ತೋಟದ ಹಾದಿಯಲ್ಲಿ ಮನೆಗೆ ನಡೆದುಕೊಂಡು ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.
ನಾಗೇಶ್ ಗೌಡ ಎಂಬುವರ ಕಾಫಿ ತೋಟದ ದಾರಿಯಲ್ಲಿ ಶ್ರೀಧರ್ ಗೌಡ ಎಂಬುವರ ಲೈನ್ ಮನೆಗೆ ಯಲ್ಲಪ್ಪ ಹೋಗುವಾಗ ಕಾಡಾನೆ ದಾಳಿ ಮಾಡಿದೆ. ಕೂಲಿ ಕೆಲಸಕ್ಕೆ ಬಂದಿದ್ದ ಯಲ್ಲಪ್ಪ ಕುಟುಂಬ ಲೈನ್ ಮನೆಯಲ್ಲಿ ನೆಲೆಸಿತ್ತು.

ಈ ರೀತಿ ಪದೇ ಪದೇ ಕಾಡಾನೆ ದಾಳಿ ನಡೆಯುತ್ತಿರುವುದರಿಂದ ಮಲೆನಾಡಿಗರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಸಂಚಾರದ ಬಗ್ಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ, ಪುಂಡಾನೆಗಳನ್ನು ಸ್ಥಳಾಂತರ ಮಾಡುವ ಕೆಲಸ ಮಾಡುತ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ಯಲ್ಲಪ್ಪ ಮೃತ ದೇಹ ಕೊಂಡೊಯ್ಯಲಾಗಿದೆ.
ಕಾಡಾನೆ ದಾಳಿ ಹಿನ್ನೆಲೆಯಲ್ಲಿ ಮಲೆನಾಡಿಗರು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿಭಟನೆಯ ಸುಳಿವನ್ನ ಅರಿತ ಪೊಲೀಸ್ ಇಲಾಖೆ ಮುಂಜಾಗ್ರತ ಕ್ರಮವಾಗಿ ಹೆಚ್ಚು ಬಂದೋಬಸ್ತ್ ಮಾಡಿಕೊಂಡಿದ್ದಾರೆ.
