ಬಾಳೆಹೊನ್ನೂರು: ಇಂದಿನ ದಿನಗಳಲ್ಲಿ ಅಪರಾಧಗಳ ಸಂಖ್ಯೆ ಅಧಿಕವಾಗಿದ್ದು, ಕೆಲವು ವಿದ್ಯಾರ್ಥಿಗಳು ಮಾದಕ ವ್ಯಸನದಂತ ಮೋಜಿಗೆ ಬಿದ್ದು ತಮ್ಮ ಜೀವನವನ್ನು ದುರಂತಗೊಳಿಸಿಕೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಮೂಡಿಸುವುದು ಪ್ರತಿಯೊಬ್ಬ ಶಿಕ್ಷಕರ ಮತ್ತು ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದು ಬಾಳೆಹೊನ್ನೂರಿನ ಠಾಣಾಧಿಕಾರಿ ಅಂಬರೀಶ್ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆಗೆ ಅನಂತ್ಯ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಆಗಮಿಸಿ ಪೊಲೀಸ್ ಠಾಣೆಯ ಮತ್ತು ಕಾನೂನು ರಕ್ಷಣೆಯ ಬಗ್ಗೆ ಮಾಹಿತಿ ಪಡೆಯುವ ಸಂದರ್ಭದಲ್ಲಿ ಸಣ್ಣ ಮಕ್ಕಳಿಗೆ ಠಾಣೆಯ ಪರಿಚಯ ಹಾಗೂ ಅಪರಾಧ ಪ್ರಕರಣಗಳ ಬಗ್ಗೆ ಹಾಗೂ ಕಾನೂನಿನ ಬಗ್ಗೆ ಮಾಹಿತಿ ನೀಡಿದರು.
ಪೊಲೀಸರೆಂದರೆ ಶಾಂತಿ ಮತ್ತು ಶಿಸ್ತು ಕಾಪಾಡುವುದು ಯಾವುದೇ ಸಂದರ್ಭದಲ್ಲಿ ಅಪರಾಧಗಳು ನಡೆಯುತ್ತಿದ್ದರೆ ಹೆದರದೆ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಏನಾದರೂ ಸಮಸ್ಯೆಗಳಿದಲ್ಲಿ ಧೈರ್ಯವಾಗಿ ಠಾಣೆಗೆ ಆಗಮಿಸಿ ನಮ್ಮ ಗಮನಕ್ಕೆ ತಂದಲ್ಲಿ ಆ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.
ನಂತರ ಎಎಸೈ ಗೋವಿಂದ ಸ್ವಾಮಿ ಮಾತನಾಡಿ, ಪೋಷಕರು ತಮ್ಮ ವಾಹನ ಚಲಾಯಿಸುವ ಸೀಟ್ ಬೆಲ್ಟ್ ಹಾಕುವಂತೆ ತಿಳಿಸಬೇಕು. ಗುಟ್ಕ ತಿಂದು ಉಗಿಯುವ ಬಗ್ಗೆ ಹಾಗೂ ಖರೀದಿಸುವ ಬಗ್ಗೆ ಮಾಹಿತಿ ನೀಡಿ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಭವಿಷ್ಯದ ದಿನಗಳಲ್ಲಿ ಕಾನೂನು ಪಾಲಿಸಲು ಮುಂದಾಗಬೇಕು. ಉತ್ತಮ ಸಮಾಜ ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ ಎಂದು ತಿಳಿಸಿದರು.
ಪೋಲೀಸ್ ಸಿಬ್ಬಂದಿಗಳಾದ ಮಹಿಳಾ ಪೊಲೀಸ್ ಉಮಾ, ಶಂಕರ್, ಮೋಹನ್, ಕೆ.ಜಿ.ಶಂಕರ್, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
