ಪ್ರವಾಸಿತಾಣ ಬೇಲೂರು ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಇದೇ ಮಾರ್ಚ್ 23 ರಿಂದ ಏಪ್ರಿಲ್ 5 ತನಕ ನಡೆಯುವ ವೈಭವದ ಬ್ರಹ್ಮ ರಥೋತ್ಸವ ಮತ್ತು ನಾಡ ರಥೋತ್ಸವಕ್ಕೆ ಮುನ್ನ ಖಜಾನೆಯಿಂದ ಕೇಶವನ ಆರಭರಣಗಳನ್ನು ಅತ್ಯಂತ ಭಕ್ತಿ ಭಾವದಿಂದ ದೇಗುಲಕ್ಕೆ ತರಲಾಯಿತು.
ಹೌದು! ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗುವ ಮೂಲಕ ಜಾಗತಿಕ ಮನ್ನಣೆಯನ್ನು ಪಡೆದ ಬೇಲೂರು ಶಿಲ್ಪಕಲೆಗಳ ತವರು, ಇಂತಹ ವಾಸ್ತುಶಿಲ್ಪಗಳನ್ನು ವೀಕ್ಷಿಸಲು ನಿತ್ಯ ಸಾವಿರಾರು ಕಲಾರಸಿಕರು ಜಗತ್ತಿನ ವಿವಿಧಡೆಯಿಂದ ಆಗಮಿಸುತ್ತಾರೆ. ಅಂತಯೇ ಇಲ್ಲಿನ ಚನ್ನಕೇಶವಸ್ವಾಮಿಗೂ ರಾಜ್ಯ ಮತ್ತು ಇನ್ನಿತರ ರಾಜ್ಯಗಳಿಂದ ಅಪಾರ ಭಕ್ತ ಸಮೂಹ ಹೊಂದಿರುವ ಕಾರಣದಿಂದ ಬೇಲೂರಿನಲ್ಲಿ ನಡೆಯುವ ಚನ್ನಕೇಶವಸ್ವಾಮಿ ಬ್ರಹ್ಮರಥೋತ್ಸವ ಹಾಗೂ ನಾಡ ರಥೋತ್ಸವಕ್ಕೆ ದಕ್ಷಿಣ ಭಾರತದಲ್ಲಿ ತನ್ನದೆಯಾದ ಐತಿಹ್ಯ ಇರುವುದು ಪ್ರಮುಖವಾಗಿದೆ. ಪ್ರತಿ ವರ್ಷದಂತೆ ಕೇಶವನ ರಥೋತ್ಸವ ಜಾತ್ರಾ ಮಹೋತ್ಸವಕ್ಕೆ ಮುನ್ನ ಹಿಂದೂ ಸಂಪ್ರದಾಯದ ಹೊಸ ವರ್ಷದ ಯುಗಾದಿ ಹಬ್ಬದ ಮುನ್ನ ಖಜಾನೆಯಲ್ಲಿರುವ ಕೇಶವ, ಸೌಮ್ಯ ನಾಯಕಿ ಮತ್ತು ರಂಗನಾಯಕಿ ಅಮ್ಮನವರ ಒಡೆವೆಗಳನ್ನು ತರಲಾಗುತ್ತದೆ. ದೇಗುಲಕ್ಕೆ ಬಂದ ಪ್ರತಿ ಆಭರಣಗಳನ್ನು ತಹಸೀಲ್ದಾರ್ ನೇತೃತ್ವದಲ್ಲಿ ಪರೀಶೀಲನೆ ನಡೆಸಿ ಬಳಿಕ ಪ್ರಧಾನ ಅರ್ಚಕರಿಗೆ ಹಸ್ತಾಂತರ ಮಾಡಲಾಗುತ್ತದೆ. ದೇಗುಲದ ಆಗಮಿಕರು ಯುಗಾದಿ ಹಬ್ಬದ ದಿನ ವಿವಿಧ ಅಭಿಷೇಕ ನಡೆದ ಬಳಿಕ ಚನ್ನಕೇಶವಸ್ವಾಮಿಗೆ ಎಲ್ಲಾ ಒಡೆವೆಗಳನ್ನು ಧರಿಸಿ ಅಲಂಕಾರ ನಡೆಸಲಾಗುತ್ತದೆ. ವಿಶೇಷವಾದ ಚಿನ್ನಾಭರಣಗಳನ್ನು ಬ್ರಹ್ಮ ರಥೋತ್ಸವ ಮತ್ತು ನಾಡ ರಥೋತ್ಸವ ದಿನ ಧರಿಸುವ ವಾಡಿಕೆ ಬೆಳೆದುಕೊಂಡು ಬಂದಿದೆ.
ವೇಲಾಪುರಿ ವಾಸ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಸತತ 15 ದಿನಗಳ ಕಾಲ ಹತ್ತಾರು ಉತ್ಸವ ಮತ್ತು ರಥೋತ್ಸವದೊಂದಿಗೆ ನಡೆದುಕೊಂಡು ಬರುತ್ತಿದೆ. ದೇಗುಲದ ಜಾತ್ರಾ ಮಹೋತ್ಸವದಲ್ಲಿ ಅಡ್ಡೆಗಾರು, ನಾಲ್ಕು ಮೂಲೆ ಪಟೇಲೆರು ಸೇರಿದಂತೆ ದೇಗುಲಕ್ಕೆ ಮುಂತಾದವರು ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ. ಮಾರ್ಚ್ 31 ಬ್ರಹ್ಮರಥೋತ್ಸವ ಹಾಗೂ ಏಪ್ರಿಲ್ 1 ನಾಡ ರಥೋತ್ಸವಕ್ಕೆ ನಾಡಿನ ವಿವಿಧ ಭಾಗದಲ್ಲಿ ಭಕ್ತರು ಹೆಚ್ಚಾಗಿ ಸೇರುವ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ದೇಗುಲ ಆಡಳಿತ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ವಿಶೇಷವಾಗಿ ವಾಹನ ದಟ್ಟನೆ ಮತ್ತು ಯಾವುದೇ ಅಹಿತಕ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕ್ರಮ ವಹಿಸಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ,ಬಿಇಒ ಭಾಗ್ಯಮ್ಮ, ಸಿಪಿಐ ರೇವಣ್ಣ, ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ಯೋಗೀಶ್, ದೇಗುಲ ಪ್ರಧಾನ ಆಗಮಿಕರಾದ ಶ್ರೀನಿವಾಸ್ ಭಟ್ಟರ್ ಮತ್ತು ನರಸಿಂಹಭಟ್ಟರ್, ಕೆಡಿಪಿ ಸದಸ್ಯೆ ಸೌಮ್ಯ ಆನಂದ, ಅಡ್ಡೆಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.
