ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನ ಮೇದೂರು ಗ್ರಾಮದಲ್ಲಿ ಮನೆಯ ಹಿಂಬಾಗಿಲ ಬೀಗ ಮುರಿದು ನಗದು, ವಿವಿಧ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿರುವ ಕಳ್ಳರು, ಮನೆಯ ಹೊರಗೆ ನಿಲ್ಲಿಸಿದ್ದ ಇನ್ನೋವಾ ಕಾರು ಕೂಡ ಬಿಡದೆ 4.50ಲಕ್ಷ ರೂ ದೋಚಿದ್ದಾರೆ.
ಟಿಎಪಿಸಿಎಂಎಸ್ ಚುನಾವಣೆ ಇದ್ದುದರಿಂದ ಗ್ರಾಮದ ಸ್ವಾಮೀಗೌಡ ಅವರು ಸೆ.24ರಂದು ಬೆಳಿಗ್ಗೆಯೇ ಮನೆಯಿಂದ ಹೊರಟು ಬೇಲೂರಿನ ಅಂಬೇಡ್ಕರ್ ವೃತ್ತದಲ್ಲಿರುವ ಕಚೇರಿಗೆ ಬಂದು ಇಡೀ ದಿನ ಚುನಾವಣಾ ಪ್ರಚಾರ ಮಾಡಿದ್ದು, ಇನ್ನೋವಾ ಕಾರಿನಲ್ಲಿ ರಾತ್ರಿ 11.30ರ ಸುಮಾರಿಗೆ ಮನೆಗೆ ಬಂದು ಮನೆಯ ಮುಂದೆ ಕಾರು ನಿಲ್ಲಿಸಿದ್ದರು.
ಸೈಟಿನ ವ್ಯವಹಾರಕ್ಕೆಂದು ಇಟ್ಟುಕೊಂಡಿದ್ದ ₹ 4.50 ಲಕ್ಷ ಅನ್ನು ಕಾರಿನ ಒಳಗಡೆ ಬ್ಯಾಗ್ನಲ್ಲಿಟ್ಟು ಕಾರು ಲಾಕ್ ಮಾಡಿ ಮನೆಯ ಒಳಗೆ ಹೋಗಿದ್ದರು. ಬಟ್ಟೆ ಬದಲಿಸಿ ಪ್ಯಾಂಟ್ ಜೇಬಿನಲ್ಲಿದ್ದ 70 ಸಾವಿರ ರೂ, ಸ್ಯಾಮ್ ಸಂಗ್ ಕಂಪನಿಯ 2 ಮೊಬೈಲ್, ಅದೇ ಕಂಪನಿಯ ವಾಚ್ ಅನ್ನು ಸೋಫಾ ಮೇಲಿಟ್ಟು ಮನೆಯ ಮೊದಲನೇ ಮಹಡಿಯಲ್ಲಿರುವ ರೂಂನಲ್ಲಿ ಮಲಗಿದ್ದರು. ಕೆಳಗಿನ ರೂಮಲ್ಲಿ ತಂದೆ ಪುಟ್ಟೇಗೌಡ, ತಾಯಿ ಗಿಡ್ಡಮ್ಮ, ಚಿಕ್ಕಮ್ಮ ಸಣ್ಣಮ್ಮ ಮಲಗಿದ್ದರು.
ಮಧ್ಯರಾತ್ರಿ 2.18 ರ ಸಮಯದಲ್ಲಿ ಸ್ವಾಮೀಗೌಡ ಅವರ ತಂದೆ ಫೋನ್ ಮಾಡಿ, ನಾವು ಮಲಗಿದ್ದ ಕೋಣೆಯ ಬಾಗಿಲು ಲಾಕ್ ಆಗಿದೆ ಎಂದು ಹೇಳಿದ್ದಾರೆ. ತಕ್ಷಣ ಕೆಳಗೆ ಬಂದು ನೋಡಿದಾಗ ಮನೆಯ ಹಿಂದಿನ ಬಾಗಿಲ ಲಾಕ್ ಮುರಿದಿದ್ದು, ಬಾಗಿಲು ತೆರೆದಿತ್ತು. ಮನೆಯನ್ನು ಪರಿಶೀಲಿಸಿ ನೋಡಿದಾಗ ಕಳ್ಳರು ಮನೆಯ ಹಿಂಬದಿಯಲ್ಲಿ ಬಟ್ಟೆ ಒಣಗಿಸಲು ಕಟ್ಟಿದ್ದ ಹಗ್ಗ ಕತ್ತರಿಸಿ, ಬಾಗಿಲು ಮುರಿದು ಮನೆಯ ಒಳಗೆ ಬಂದಿದ್ದಾರೆ.
ಸೋಫಾದ ಮೇಲಿಟ್ಟಿದ್ದ ₹ 70 ಸಾವಿರ, 2 ಮೊಬೈಲ್, 25 ಸಾವಿರ ಬೆಲೆಯ ವಾಚ್ ಅನ್ನು ಕದ್ದಿರುವ ಕಳ್ಳರು, ಅಲ್ಲಿಯೇ ಇದ್ದ ಕಾರಿನ ಕೀಯನ್ನು ತೆಗೆದುಕೊಂಡಿದ್ದು, ಅದನ್ನು ಬಳಸಿ ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರು, ಅದರಲ್ಲಿಟ್ಟಿದ್ದ 4.50 ಲಕ್ಷ ನಗದು, ವಿವಿಧ ಬ್ಯಾಂಕುಗಳು ಎಟಿಎಂ, ಚೆಕ್ ಹಾಗೂ ಜಮೀನಿನ ದಾಖಲೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಮನೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಮಧ್ಯರಾತ್ರಿ 1 ರಿಂದ 2.10ರ ನಡುವೆ ಸುಮಾರು 4-5 ಜನ ಕಳ್ಳರು ಮನೆಯ ಬಾಗಿಲು ಮುರಿದು ಕಳವು ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ಈ ಸಂಬಂಧ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
