ಚಿಕ್ಕಮಗಳೂರು: ಸ್ನೇಹಿತರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.
ಉತ್ತರಪ್ರದೇಶ ಮೂಲದ ಸರ್ಫ್ರಾಜ್ ಅನ್ಸಾರಿ (35) ಕೊಲೆಯಾದ ದುರ್ದೈವಿ. ರಿಯಾಜ್, ಅರಿಫ್, ಛೋಟು, ಸತಾರಾಂ ಎಂಬುವರು ಕೊಲೆಗೈದು ಆ ನಂತರ ಓಡಿ ಹೋಗಿರುವ ಆರೋಪಿಗಳು.
ಉತ್ತರಪ್ರದೇಶ ಮೂಲದ ಐವರು ಯುವಕರು ಪಟ್ಟಣದ ಡಿವಿಜಿ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದರು. ಸೋಮವಾರ ತಡರಾತ್ರಿ ಗಲಾಟೆ ಮಾಡಿಕೊಂಡಿದ್ದು, ಎಲ್ಲರೂ ಸೇರಿ ಸರ್ಫ್ರಾಜ್ ಅನ್ಸಾರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆಗೈದು ರಾತ್ರೋರಾತ್ರಿ ಪರಾರಿಯಾಗಿದ್ದಾರೆ.
ಆರೋಪಿಗಳಿಗೆ ಕೆಲಸ ಕೊಡುತ್ತಿದ್ದ ಮೇಸ್ತ್ರಿ ಪದೇಪದೆ ಫೋನ್ ಮಾಡಿದರೂ ಪ್ರತಿಕ್ರಿಯೆ ಇಲ್ಲದ ಹಿನ್ನೆಲೆಯಲ್ಲಿ ಮರುದಿನ ಡಿವಿಜಿ ರಸ್ತೆಯ ಬಾಡಿಗೆ ಮನೆಗೆ ಬಂದು ನೋಡಿದ್ದಾರೆ. ಸರ್ಫ್ರಾಜ್ ಅನ್ಸಾರಿ ಕೊಲೆಯಾಗಿರುವುದನ್ನು ಗಮನಿಸಿ ಸ್ಥಳೀಯರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪಟ್ಟಣ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಯಾದ ಆರೋಪಿ ಸರ್ಫ್ರಾಜ್ ಅನ್ಸಾರಿ ಮೂಲತಹ ಉತ್ತರ ಪ್ರದೇಶದವನಾಗಿದ್ದು ಹೀಗಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಕುಟುಂಬಸ್ಥರ ಆಗಮನಕ್ಕಾಗಿ ಇರಿಸಲಾಗಿದೆ.
