ಚಿಕ್ಕಮಗಳೂರು: ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ಕಡೂರು ವಲಯದ ಹಿರೇನಲ್ಲೂರು ಗಸ್ತಿನ ಕಲ್ಲೇನಹಳ್ಳಿ ಗ್ರಾಮದ ಸರ್ವೆ ನಂಬರ್ 11ರಲ್ಲಿ ಸುಮಾರು 1.5 to 2 ವರ್ಷ ಪ್ರಾಯದ ಮೂರು ಕೃಷ್ಣ ಮೃಗ (2 ಹೆಣ್ಣು 1 ಗಂಡು) ಬೇಟೆಗಾರರ ಗುಂಡು ಹಾರಿಸಿ ಕೊಂದಿದ್ದಾರೆ.
“ಬಾಸೂರು ಕೃಷ್ಣ ಮೃಗ ಸಂರಕ್ಷಿತ” ಪ್ರದೇಶದ ಪಕ್ಕದ ಜಮೀನಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ರೂ ಅರಣ್ಯ ಇಲಾಖೆಯ ಅಧಿಕಾರಿಗಳು ತರಾತುರಿಯಲ್ಲಿ ಮಂಗಳವಾರ ಸಂಜೆ ವೇಳೆಯಲ್ಲಿ ಮೃ*ತ ಕೃಷ್ಣ ಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿ ಈ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ಮಾಡಿದ್ದಾರೆ ಅಂತಾ ವನ್ಯಜೀವಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಯಾವುದೇ ವನ್ಯಜೀವಿ ವೈದ್ಯರು ಇಲ್ಲದೇ ಮರೆಣೋತ್ತರ ಪರೀಕ್ಷೆ ನಡೆಸಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಕಳೆದ ವರ್ಷ ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ಹಿನ್ನೀರಿನಲ್ಲಿ ಗಂಡು ಆನೆಯನ್ನು ಹೆಣ್ಣು ಆನೆ ಎಂದು ಮುಚ್ಚಿಹಾಕುವ ಕೆಲಸಕ್ಕೆ ಬೆಂಬಲ ನೀಡಿದ ಸರ್ಕಾರೇತರ ಸಂಸ್ಥೆ ಕೆಲವು ವ್ಯಕ್ತಿಗಳನ್ನು ಮಾತ್ರ ಕೃಷ್ಣ ಮೃಗಗಳ ಮರಣೋತ್ತರ ಪರೀಕ್ಷೆಗೆ ಕರೆದುಕೊಂಡು ಹೋಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ
ತರಾತುರಿಯಲ್ಲಿ ಕೃಷ್ಣ ಮೃಗಗಳ ಮರಣೋತ್ತರ ಅಂತ್ಯಕ್ರಿಯೆ ಮಾಡಲಾಗಿದೆ. ವ್ಯವಸ್ಥಿತವಾಗಿ ಈ ಬೇಟೆ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡ್ತಿದ್ದಾರೆ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷ್ಣ ಮೃಗಳಿಗೆ ಯಾರು ಗುಂಡು ಹೊಡೆದು ಕೊಂದು ಹಾಕಿದ್ದಾರೆ?
ಕಾವಲಿನಲ್ಲಿ ಬೇಟೆ ನಿಗ್ರಹ ಶಿಬಿರ ಇದ್ದರೂ, ಕೃಷ್ಣ ಮೃಗಗಳ ಮೇಲೆ ಗುಂಡು ಹೊಡೆದು ಕೊ*ಲ್ಲಲಾಗಿದೆ. ಇದೆಲ್ಲಾ ಹೇಗೆ ಸಾಧ್ಯ, ಇಲ್ಲಿ ಸಿಬ್ಬಂದಿಗಳು ಪಾತ್ರವೇನು ಎಂದು ಪ್ರಶ್ನೆ ಮಾಡಿದ್ದಾರೆ.
ಹೀಗೆ ಮೂರು ಕೃಷ್ಣ ಮೃಗಗಳನ್ನ ಕೊಂದಿದ್ರೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಯಾವುದೇ ಫೋಟೋ, ವಿಡಿಯೋವನ್ನ ಕೂಡ ಮಾಡಿಕೊಂಡಿಲ್ಲ. ಇಲಾಖೆಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿಯನ್ನೂ ಕೂಡ ನೀಡದೇ ಇರೋದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಕೆಲ ಸ್ಥಳೀಯರ ಪ್ರಕಾರ, ಇಲ್ಲಿ ‘ದೊಡ್ಡ ಬೇಟೆ’ಯೇ ನಡೆದಿದ್ದು, ಜೀಪಿನಲ್ಲಿ ಬಂದು ಶಿಕಾರಿ ಮಾಡಿಕೊಂಡು ಹೋಗಲಾಗಿದೆ. ಕೊಂ*ದಿದ್ದ ಕೆಲ ಬಲಿತ ಕೃಷ್ಣ ಮೃಗಗಳನ್ನ ತೆಗೆದುಕೊಂಡು ಹೋಗಲಾಗಿದ್ದು, ಕೊನೆಗೆ ಯಾರೋ ಬಂದಿರುವ ಶಬ್ಧ ಕೇಳಿ ಈ ಕೃಷ್ಣ ಮೃಗಗಳನ್ನ ಬಿಟ್ಟು ಹೋಗಿರುವ ಸಾಧ್ಯತೆಗಳಿವೆ ಎಂದು ಸಂಶಯ ಹೊರಹಾಕಿದ್ದಾರೆ.
ಈ ಬಗ್ಗೆ ಸರಿಯಾದ ಉನ್ನತ ಮಟ್ಟದ ತನಿಖೆ ಆಗಬೇಕು. ಪ್ರಕರಣವನ್ನ ಮುಚ್ಚಿಹಾಕುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿರುವುದು ಯಾಕೆ? ಈ ಎಲ್ಲ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಉನ್ನತ ಮಟ್ಟದ ತನಿಖೆಗೆ ಈ ಪ್ರಕರಣವನ್ನು ಒಳಪಡಿಸಬೇಕು ಎಂದು ವನ್ಯಜೀವಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಅಳಿವಿನ ಅಂಚಿನಲ್ಲಿರುವ ಮೂಕ ಕೃಷ್ಣ ಮೃಗಗಳ ಸಾವಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹ ಕೇಳಿ ಬಂದಿದೆ.
