ಚಿಕ್ಕಮಗಳೂರು: ಕಾಫಿನಾಡಲ್ಲಿ ತೀವರ ಬಿಸಿಲಿನ ಧಗೆಯ ನಡುವೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಚಿಕ್ಕಮಗಳೂರು ತಾಲೂಕಿನ ತೊಗರಿಹಂಕಲ್ ಗ್ರಾಮದಲ್ಲಿ ಎಂಟು ಎಕರೆ ಕಬ್ಬಿನ ಗದ್ದೆ ಹಾಗೂ ಒಂದೂವರೆ ಕಾಫಿ ತೋಟ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಗ್ರಾಮದ ರೈತರಾದ ಪುಟ್ಟಸ್ವಾಮಿ, ಹೇಮೇಶ್ ಹಾಗೂ ಸುರೇಶ್ ಎಂಬುವರಿಗೆ ಸೇರಿದ ಜಮೀನುಗಳು ಬೆಂಕಿಗಾಹುತಿಯಾಗಿವೆ. ಇದರ ಜೊತೆ ಲಕ್ಷಾಂತರ ರೂ ಮೌಲ್ಯದ ಕೃಷಿ ಪರಿಕರಗಳು ಸಹ ನಾಶವಾಗಿವೆ.
ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ಗ್ರಾಮಸ್ಥರೆಲ್ಲರೂ ಪಕ್ಕದ ಶುಭ ಕಾರ್ಯವೊಂದರಲ್ಲಿ ಭಾಗಿಯಾಗಿದ್ದರು. ದಾರಿಹೋಕರು ಎಸೆದ ಬೀಡಿ ಅಥವಾ ಸಿಗರೇಟ್ ತುಂಡಿನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ದಳದ ತಕ್ಷಣದ ಕ್ರಮದಿಂದಾಗಿ ಪಕ್ಕದ ಜಮೀನುಗಳಿಗೆ ಬೆಂಕಿ ಹರಡುವುದು ತಪ್ಪಿಸಿದ್ದಾರೆ.
