ಚಿಕ್ಕಮಗಳೂರು: ತಾಲೂಕಿನ ಮುತ್ತೋಡಿ ಅರಣ್ಯಕ್ಕೆ ಬೆಂಕಿ ಇಟ್ಟವರ ಪತ್ತೆಗೆ ಶ್ವಾನದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.

ಕಾಡಿಗೆ ಬೆಂಕಿ ಕೊಟ್ಟವರ ಪತ್ತೆಗಾಗಿ ಕಾಡಿನಲ್ಲಿ ಎರಡು ಅರಣ್ಯ ಸಂಚಾರಿ ದಳದ ಶ್ವಾನಗಳು ಹುಡುಕಾಟ ನಡೆಸುತ್ತಿವೆ. ಶಿರವಾಸೆ ಗ್ರಾಮದ ಹಿಡುವಳಿ ಮಾಡದ ಜಮೀನಿನಿಂದ ಬೆಂಕಿ ಹರಡಿದೆ ಎನ್ನಲಾಗುತ್ತಿದೆ. ಥರ್ಮಲ್ ಡ್ರೋನ್ ಮೂಲಕ ಬೆಂಕಿ ಕೊಡುವವರ ಶೋಧಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಇದರ ಜೊತೆ ಮುತ್ತೋಡಿ ಅರಣ್ಯದಂಚಿನ ಗ್ರಾಮಗಳ ಜನರಿಗೆ ಇಲಾಖೆ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.

ಮುತ್ತೋಡಿ ಅರಣ್ಯದ ಸುತ್ತಲೂ ಬೆಂಕಿ ಹರಡದಂತೆ ವ್ಯವಸ್ಥೆ ಸಹ ಮಾಡಲಾಗಿದೆ. ಬಿಸಿಲ ಧಗೆಯಿಂದ ಅರಣ್ಯ ರಕ್ಷಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ. ಇನ್ನೂ ತಂತ್ರಜ್ಞಾನ ಹಾಗೂ ಸಿಬ್ಬಂದಿ ಕೊರತೆಯನ್ನು ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಎದುರಿಸುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
