ಚಿಕ್ಕಮಗಳೂರು : ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಸಿಂಸೆ, ಅರಳಿಕೊಪ್ಪ, ವಗ್ಗಡೆ ಕಾನೂರು, ಗುಬ್ಬಿಗಾ ಗ್ರಾಮಗಳಲ್ಲಿ ಕಳೆದ ಒಂದು ವರ್ಷದಿಂದ ಒಂಟಿ ಸಲಗವೊಂದರ ಉಪಟಳ ಮೀರಿದ್ದು ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು, ಕೃಷಿ ಉಪಕರಣಗಳನ್ನು ನಾಶಪಡಿಸುತ್ತಿರುವುದು ಮಾತ್ರವಲ್ಲದೇ ಜನರು ಮನೆಯಿಂದ ಹೊರಗೆ ಬರೋದಕ್ಕೂ ಭಯಪಡುವಂತಹ ವಾತಾವರಣ ನಿರ್ಮಿಸಿದೆ.
ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟುವ ಪ್ರಯತ್ನ ಮಾಡಿದರೂ ಅದು ಸಫಲವಾಗುತ್ತಿಲ್ಲ. ಹೀಗಾಗಿ ಈ ಕಾಡಾನೆಯನ್ನು ಸ್ಥಳಾಂತರಗೊಳಿಸಬೇಕು ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡ ಅವರು ಸಿಂಸೆ ಗ್ರಾಮಸ್ಥರ ನಿಯೋಗದೊಂದಿಗೆ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಮಾಡಿದ್ದರು. ಇದೀಗ ಈ ಮನವಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಸೆಕ್ಷನ್ 11(1) (ಎ) ಅನ್ವಯ ಆನೆ ಸೆರೆ ಕಾರ್ಯಾಚರಣೆಗೆ ಆದೇಶ ಹೊರಡಿಸಿದ್ದಾರೆ. ಅದರಂತೆ ಮುಂದಿನ ತಿಂಗಳು ಅಂದರೆ ಅಕ್ಟೋಬರ್ ಮೊದಲ ವಾರದಲ್ಲಿ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭವಾಗಲಿದೆ.
ಪ್ರಮಾಣಿತ ಕಾರ್ಯವಿಧಾನದಂತೆ ಲಕ್ಷ್ಮಣ, ಅಜಯ, ಮಾರ್ತಾಂಡ ಹಾಗೂ ಸಕ್ಕರೆ ಬೈಲು ಆನೆ ಶಿಬಿರದ 3 ಆನೆ ಬಳಸಿಕೊಂಡು ಸ್ಥಳೀಯರಿಗೆ ಯಾವುದೇ ಅಪಾಯ ಆಗದ ರೀತಿಯಲ್ಲಿ ಕಾರ್ಯಾಚರಣೆ ನಡೆಸಲು ಆದೇಶ ನೀಡಲಾಗಿದೆ. ಆನೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಈ ಆನೆಯ ಉಪಟಳದಿಂದ ಬೇಸತ್ತು ಹೋಗಿರುವ ಎನ್ ಆರ್ ಪುರ ತಾಲೂಕಿನ ಒಂದಷ್ಟು ಗ್ರಾಮಗಳ ಜನರಿಗೆ ಕೊಂಚ ನೆಮ್ಮದಿ ತಂದಿದೆ.

