ಚಿಕ್ಕಮಗಳೂರು: ಐಟಿಐ ವಿದ್ಯಾರ್ಥಿಯೋರ್ವನಿಗೆ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಲ್ಲಿ ಅಟೆಂಡರ್ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕಳಸಾಪುರದ ಗಂಗಾಧರ್ ಮತ್ತು ಹಾಸನದ ಕುಮಾರ್ ಎಂಬುವವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಗಂಗಾಧರ್ ತನಗೆ ಹಾಸನದ ಕುಮಾರ್ ಪರಿಚಯವಿದ್ದು, ಅವರ ಮೂಲಕ ಬ್ಯಾಂಕ್ನಲ್ಲಿ ಕೆಲಸ ಕೊಡಿಸುವುದಾಗಿ ಬೆಳವಾಡಿ ಗ್ರಾಮದ ಭರತ್ ಅವರ ಪೋಷಕರನ್ನು ನಂಬಿಸಿದ್ದರು. ಕೆಲಸಕ್ಕಾಗಿ 2.50 ಲಕ್ಷ ರೂಪಾಯಿ ನೀಡಬೇಕೆಂದು ತಿಳಿಸಿದ್ದರಿಂದ, ಭರವಸೆ ನಂಬಿದ ಪೋಷಕರು 2024ರ ಜುಲೈನಲ್ಲಿ ಗಂಗಾಧರ್ ಅವರ ಮನೆಯಲ್ಲಿ ಆರೋಪಿಗಳಿಗೆ ನಗದು ಹಣ ನೀಡಿದ್ದರು.
ಇದಾದ ಎರಡು ತಿಂಗಳ ನಂತರ ಆರೋಪಿಗಳು ಹಳೆಯ ದಿನಾಂಕವಿರುವ (2019ರ ಸಾಲಿನ) ಪ್ರವೇಶ ಪತ್ರವೊಂದನ್ನು ನೀಡಿದ್ದರು. ಇದರ ಬಗ್ಗೆ ಪೋಷಕರು ಪ್ರಶ್ನಿಸಿದಾಗ, ನ್ಯಾಯಾಲಯದ ತಡೆಯಾಜ್ಞೆ ತೆರವುಗೊಂಡಿರುವುದರಿಂದ ಹಳೆಯ ಪ್ರವೇಶ ಪತ್ರವೇ ಚಾಲ್ತಿಯಲ್ಲಿದೆ ಎಂದು ಸುಳ್ಳು ಹೇಳಿ ನಂಬಿಸಿದ್ದರು.

ದಿನಗಳೆದರೂ ಪರೀಕ್ಷೆ ನಡೆಯದ ಕಾರಣ ಅನುಮಾನಗೊಂಡ ಪೋಷಕರು ಕೆಲಸ ಬೇಡ. ಹಣ ವಾಪಸ್ ನೀಡಿ ಎಂದು ಕೇಳಿದ್ದರು. ತೀವ್ರ ಒತ್ತಡದ ನಂತರ ಆರೋಪಿಗಳು ಐದಾರು ತಿಂಗಳ ಹಿಂದೆ 1.70 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸಿದ್ದು, ಇನ್ನುಳಿದ 80,000 ರೂಪಾಯಿ ಹಣವನ್ನು ನೀಡದೆ ಸತಾಯಿಸುತ್ತಿದ್ದಾರೆ.
ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಗಂಗಾಧರ್ ಮತ್ತು ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂತ್ರಸ್ತ ಭರತ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
