ಚಿಕ್ಕಮಗಳೂರು: ತಾಲ್ಲೂಕಿನ ಕಳಸಾಪುರದ ಕರಾಳಮ್ಮ ದೇವಾಲಯ ಆವರಣದಲ್ಲಿ ಡಿಸೆಂಬರ್ 23ರಂದು ‘ರೈತ ದೇವೋಭವ’ ಮತ್ತು ‘ಐಸಿರಿ ಫಿಟ್ನೆಸ್ ಚೆಕ್ 02’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ದಂತ ತಪಾಸಣೆ, ನೇತ್ರ ತಪಾಸಣೆ ಮತ್ತು ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಹೃದ್ರೋಗ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ ಎಂದು ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ ತಿಳಿಸಿದರು.
ಮಧ್ಯಾಹ್ನ 12 ಗಂಟೆಗೆ ಕೃಷಿ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಪ್ರಯುಕ್ತ ‘ರೈತ ದೇವೋಭವ’ ಕಾರ್ಯಕ್ರಮ ಆಯೋಜಿಸಿದ್ದು, ರೈತಸ್ನೇಹಿ ಮೂರು ಕಾರ್ಯಕ್ರಮಗಳ ಲೋಗೋಗಳ ಅನಾವರಣ ಮತ್ತು “ಮಾದರಿ ಕೃಷಿಕ 2025 ” ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಸಿದರು.
ಕಾರ್ಯಕ್ರಮದ ಉದ್ಘಾಟನೆ ಶಾಸಕ ಎಚ್.ಡಿ. ತಮ್ಮಯ್ಯ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಭಾರತದ ನೈಸರ್ಗಿಕ ಕೃಷಿ ಪಿತಾಮಹ ಚಂದ್ರಶೇಖರ ನಾರಾಣಾಪುರ, ಐಸಿರಿ ಫೌಂಡೇಶನ್ ಸಂಸ್ಥೆ ಅಧ್ಯಕ್ಷ ರೋಹನ್ ಭಾರ್ಗವಪುರಿ, ಬ್ರಹ್ಮಕುಮಾರಿಸ್ ಸಂಸ್ಥೆ ರಾಜಯೋಗಿನಿ ಬಿ.ಕೆ ಭಾಗ್ಯಲಕ್ಷ್ಮಿ ಭಾಗವಹಿಸಲಿದ್ದಾರೆ.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ತಿರುಮಲೇಶ, ಕಳಸಾಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಸ್ ಸತೀಶ್, ಗ್ರಾಮಪಂಚಾಯಿತಿ ಅಧ್ಯಕ್ಷೆ ಶಿವರತ್ನ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ವೇತಾ ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗ್ರಾಮಪಂಚಾಯಿತಿ ಸದಸ್ಯ ಯೋಗೇಶ್, ಚಲನ ಚಿತ್ರ ನಿರ್ದೇಶಕ ಯೋಗೇಶ್, ಸಚಿನ್ ಸಿಂಗ್, ಶರತ್, ಶ್ರೀಧರ್ ಉಪಸ್ಥಿತರಿದ್ದರು.
