ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ವ್ಯಾಪ್ತಿಯ ಬಫರ್ ಜೋನ್ ಮತ್ತು ಪರಿಸರ ಸೂಕ್ಷ್ಮ ವಲಯದಲ್ಲಿ ಖಾಸಗಿ ಸಂಸ್ಥೆಯೊಂದು ಬೃಹತ್ ರೆಸಾರ್ಟ್ ನಿರ್ಮಾಣ ಮಾಡುತ್ತಿದೆ. ಕೊಳಗಾವೆ ಗ್ರಾಮದ ಸರ್ವೆ ನಂಬರ್ 53 ರಲ್ಲಿ ಖಾಸಗಿ ರೆಸಾರ್ಟ್ ನಿರ್ಮಾಣವಾಗುತ್ತಿದ್ದು,ಇದಕ್ಕೆ ಕೇಂದ್ರದ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಪೂರ್ವಾನುಮತಿ ಪಡೆದಿಲ್ಲ.
ಪರಿಸರ ಸೂಕ್ಷ್ಮ ವಲಯ ಇದಾಗಿದ್ದು ಕೇಂದ್ರದ ಸರ್ಕಾರದ ಪರಿಸರ ಸಚಿವಾಲಯದಿಂದ ಅನುಮತಿ ಪಡೆಯಬೇಕಿತ್ತು ಯಾವುದೇ ಪೂರ್ವಾನುಮತಿ ಇಲ್ಲದೆ ರೆಸಾರ್ಟ್ ಕಾಮಗಾರಿ ನಡೆಯುತ್ತಿದೆ.
ಇದರಿಂದ ಭದ್ರಾ ಅರಣ್ಯದ ಹುಲಿಗಳ ಅವಾಸಸ್ಥಾನ ಮತ್ತು ಅವುಗಳ ಮುಕ್ತ ಸಂಚಾರಕ್ಕೆ ಧಕ್ಕೆ ಉಂಟಾಗಲಿದೆ.
ಅಳಿವಿನ ಅಂಚಿನಲ್ಲಿ ಇರುವ ಅನೇಕ ಪಕ್ಷಿ ಪ್ರಾಣಿ ಸಂಕುಲ ಇಲ್ಲಿದೆ.ಇಷ್ಟೆಲ್ಲಾ ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರ ಒಡೆತನದ ರೆಸಾರ್ಟ್ ಇದಾಗಿದೆ ,ಇದಕ್ಕೆ ಹೆದರಿ ವನ್ಯಜೀವಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಪರಿಸರವಾದಿಗಳದು.ಈ ಕೂಡಲೇ ಅಕ್ರಮ ರೆಸಾರ್ಟ್ ಕಾಮಗಾರಿ ನಿಲ್ಲಿಸಬೇಕು ಎನ್ನುವುದು ವನ್ಯಜೀವಿ ಪ್ರಾಣಿ ಪ್ರಿಯರ ಒತ್ತಾಯ.
ಹುಲಿಗಳ ಓಡಾಟ :
ಭದ್ರಾ ಹುಲಿ ಸಂರಕ್ಷಿತ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶವಾದ ಮುಳ್ಳಯ್ಯನಗಿರಿ ಚಂದ್ರದ್ರೋಣ ಪರ್ವತ ಶ್ರೇಣಿಗಳಲ್ಲಿ ಹುಲಿಗಳ ಓಡಾಟ ಮಾಡುತ್ತಿರುವ ವಿಡಿಯೋಗಳು ಕಂಡುಬಂದಿವೆ.ಮೂರು ಹುಲಿಗಳು ಹುಲ್ಲುಗಾವಲ ನಡುವೆ ಓಡಾಡುವ ಫೋಟೋ ವಿಡಿಯೋ ವೈರಲ್ ಆಗಿವೆ.
ಈ ಗಿರಿ ಶ್ರೇಣಿಗಳಲ್ಲಿ ಹುಲಿಗಳು ಸಂಖ್ಯೆ ಉತ್ತಮವಾಗಿದೆ.
2014 ರ ನವೆಂಬರ್ ತಿಂಗಳಲ್ಲಿ ಇದೇ ಪ್ರದೇಶದಲ್ಲಿ ಹುಲಿ ಮತ್ತು ಮರಿಗಳು ಕಂಡುಬಂದಿದ್ದು,ಅದರಲ್ಲಿ ಮರಿ ಹುಲಿ ಸ್ಥಳೀಯ ಮಹಿಳೆಯನ್ನು ಕೊಂದಿತ್ತು.
ಅನಂತರ ಹುಲಿ ಮರಿಯನ್ನು ಹಿಡಿದು ಬೆಳಗಾವಿ ಭೀಮಗಡ ಅರಣ್ಯಕ್ಕೆ ಬಿಡಲಾಗಿತ್ತು,ಅಲ್ಲಿ ಯೂ ಮಹಿಳೆ ಒಬ್ಬರನ್ನು ಕೊಂದಿತ್ತು.ಅನಂತರ ಹುಲಿಯನ್ನು ಗುಂಡಿಟ್ಟು ಕೊಲ್ಲಲಾಗಿತ್ತು.
ಮತ್ತೆ ಇದೇ ಪ್ರದೇಶದಲ್ಲಿ ಹುಲಿ ಮತ್ತು ಮರಿಗಳು ಕಂಡುಬಂದಿದೆ. ಇತ್ತ ಗಿರಿ ಸಾಲಿನಲ್ಲಿ ರೆಸಾರ್ಟ್ ಗಳು ನಾಯಿ ಕೊಡೆಗಳಂತೆ ಹುಟ್ಟಿಕೊಳ್ಳುತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ ಎನ್ನುತ್ತಾರೆ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ. ವೀರೇಶ್.
ಅರಣ್ಯ ಇಲಾಖೆ ಈಗಲಾದರೂ ಎಚ್ಚೆತ್ತುಕೊಂಡು ರಾಜಕೀಯ ಒತ್ತಡಕ್ಕೆ ಮಣಿಯದೆ ತಕ್ಷಣ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
