ಚಿಕ್ಕಮಗಳೂರು: ನಗರದಲ್ಲಿ ಮಿತಿ ಮೀರಿರುವ ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ನಗರಸಭೆ ಈಗ ವಿನೂತನ ಹಾಗೂ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 8,000ಕ್ಕೂ ಅಧಿಕ ಬೀದಿನಾಯಿಗಳಿದ್ದು, ಇವುಗಳ ನಿಯಂತ್ರಣಕ್ಕಾಗಿ ಈವರೆಗೆ ಏಳು ಬಾರಿ ಟೆಂಡರ್ ಕರೆದಿದ್ದರೂ, ಯಾವುದೇ ಸಂಸ್ಥೆಗಳು ಮುಂದೆ ಬಾರದಿರುವುದು ಆಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿತ್ತು. ಇದೇ ಕಾರಣಕ್ಕೆ ಬೀದಿ ನಾಯಿಗಳನ್ನು ದತ್ತು ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿತ್ತಾದರೂ, ಅದಕ್ಕೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನಗರಸಭೆಯೇ ನೇರವಾಗಿ ಕಾರ್ಯ ಪ್ರವೃತ್ತವಾಗಿದ್ದು, ತನ್ನ ಸ್ವಂತ ಸಿಬ್ಬಂದಿಗೇ ‘ಡಾಗ್ ಕ್ಯಾಚಿಂಗ್’ ಅಂದರೆ ನಾಯಿ ಹಿಡಿಯುವ ತರಬೇತಿ ನೀಡಲು ನಿರ್ಧರಿಸಿದೆ.
ಈ ಹಿಂದೆ ಸಿಬ್ಬಂದಿಯನ್ನು ತರಬೇತಿಗಾಗಿ ಗೋವಾಕ್ಕೆ ಕಳುಹಿಸುವ ಯೋಜನೆಯಿತ್ತಾದರೂ, ಈಗ ನಗರದ ಬೀದಿನಾಯಿಗಳ ಹಿತರಕ್ಷಣಾ ಸಮಿತಿಯಲ್ಲೇ ಪರಿಣಿತರಿರುವುದರಿಂದ ಸ್ಥಳೀಯವಾಗಿಯೇ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ತರಬೇತಿ ಪಡೆದ ಸಿಬ್ಬಂದಿ ಮೂಲಕ ಬೀದಿನಾಯಿಗಳನ್ನು ಸೆರೆ ಹಿಡಿದು ಅವುಗಳಿಗೆ ಸಂತಾನಹರಣ ಚಿಕಿತ್ಸೆ (ABC) ನೀಡುವ ಪ್ರಕ್ರಿಯೆಯನ್ನು ಶೀಘ್ರವೇ ಆರಂಭಿಸಲಾಗುವುದು. ಇದರೊಂದಿಗೆ, ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ನಾಯಿಗಳಿಗೆ ಆಹಾರ ಹಾಕುವುದರಿಂದ ಅವುಗಳ ಗುಂಪು ಹೆಚ್ಚಾಗಿ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ನಗರಸಭೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
