ಚಿಕ್ಕಮಗಳೂರು: ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡಿನಿಂದ ಚಿರತೆ ಸಾವನ್ನಪ್ಪಿದ ಘಟನೆ ತರೀಕೆರೆಯ ಅರಣ್ಯ ವಲಯ ವ್ಯಾಪ್ತಿಯಲ್ಲಿ ನಡೆದಿದೆ.
ನ.29 ರಂದು ತರೀಕೆರೆ ಅರಣ್ಯ ವ್ಯಾಪ್ತಿಯ ಬೈರಾಪುರದಲ್ಲಿ ಮನೆಯ ಎದುರೇ 11 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು. ಅದರಂತೆ ಅರಣ್ಯ ಇಲಾಖೆ ಸಿಬ್ಬಂದಿ ಇಂದು (ನ.30) ಚಿರತೆ ಸೆರೆಹಿಡಿಯಲು ತೆರಳಿದ್ದರು. ಕಾರ್ಯಾಚರಣೆ ವೇಳೆ ಚಿರತೆ ದಾಳಿಗೆ ಯತ್ನಿಸಿದೆ. ಇದರಿಂದ ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದಾರೆ.
ಅರಣ್ಯ ಸಿಬ್ಬಂದಿ ಗುಂಡೇಟಿಗೆ ಚಿರತೆ ಸಾವನ್ನಪ್ಪಿದೆ. ಚಿರತೆ ಸಾವಿನಿಂದಾಗಿ ತರೀಕೆರೆ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಬೈರಾಪುರ ಗ್ರಾಮದ ಹೊರವಲಯದ ಪಾಳು ಬಿದ್ದ ಲೈನ್ನಲ್ಲಿ ಅಡಗಿ ಕುಳಿತಿದ್ದ ಚಿರತೆ ಸೆರೆಗಾಗಿ ಸಿಬ್ಬಂದಿಗಳು ತೆರಳಿದ್ದಾಗ ಚಿರತೆ ದಾಳಿಗೆ ಯತ್ನಿಸಿದೆ. ಹೀಗಾಗಿ ಅರಣ್ಯ ಸಿಬ್ಬಂದಿ ತಮ್ಮ ಆತ್ಮರಕ್ಷಣೆಗಾಗಿ ಚಿರತೆಗೆ ಗುಂಡು ಹಾರಿಸಿದ್ದಾರೆ. ಇನ್ನು ಮಕ್ಕಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯನ್ನು ಜೀವಂತ ಅಥವಾ ಜೀವರಹಿತವಾಗಿ ಹಿಡಿಯಲು ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದರು.
