ಚಿಕ್ಕಮಗಳೂರು: ಧಾರಾಕಾರ ಮಳೆಗೆ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿ ದೇವಗೊಂಡನಹಳ್ಳಿಯ ಸೀತಮ್ಮ ಮತ್ತು ಲಕ್ಷ್ಮಣ್ಗೌಡ ಎಂಬುವವರ ಪುತ್ರ ಮೂರ್ತಿ ಎಂಬಾತ ದನ ಮೇಯಿಸಲು ಹೋಗಿದ್ದಾಗ ಆಕಸ್ಮಿಕ ಹಳ್ಳದ ನೀರಿನಲ್ಲಿ ಕೊಚ್ಚಿಹೋಗಿದ್ದ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂ ಚೆಕ್ನ್ನು ಶಾಸಕ ಎಚ್.ಡಿ. ತಮ್ಮಯ್ಯ ಅವರು ಹಸ್ತಾಂತರಿಸಿದರು.
ಹೌದು .. ದನಗಳನ್ನ ಮೇಯಿಸಲು ಹೋದಾಗ ಈ ದುರ್ಘಟನೆ ಸಂಭವಿಸಿತ್ತು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೆಟಿ ನೀಡಿದ ಶಾಸಕ ಎಚ್ ಡಿ. ತಮ್ಮಯ್ಯ ಅವರು ಕುಟುಂಬಕ್ಕೆ ಸಾಂತ್ವನ ಹೇಳಿದರು. ಸೋಮವಾರ ಅಧಿಕಾರಿಗಳ ಜೊತೆ ಮೃತ ಕುಟುಂಬಸ್ಥರ ಮನೆಗೆ ಭೇಟಿ ನೀಡಿ 5 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನ ನೀಡಿದರು.
ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅವರು, ಮಗನ ಅಗಲಿಕೆಯಿಂದಾಗುವ ಆರ್ಥಿಕ ಸಂಕಷ್ಟವನ್ನು ಭರಿಸುವ ವ್ಯವಸ್ಥೆಯನ್ನು ರಾಜ್ಯಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದರು. ಹಾಗೆ ಪರಿಹಾರದ ಹಣವನ್ನು ದುಂದುವಚ್ಚ ಮಾಡದೇ ಸರಿಯಾಗಿ ಬಳಸಿಕೊಳ್ಳಿ ಎಂದು ಕಿವಿಮಾತು ಸಹ ಹೇಳಿದರು.
ಚೆಕ್ ವಿತರಣಾ ವೇಳೆ ತಹಶೀಲ್ದಾರ್ ರೇಷ್ಮಾಶೆಟ್ಟಿ, ಗ್ರಾ.ಪಂ ಸದಸ್ಯರಾದ ಯೋಗೀಶ್, ಗೌರಮ್ಮ, ನಾಗೇಗೌಡ, ಲಕ್ಷ್ಮಮ್ಮ, ಗ್ರಾಮಸ್ಥರಾದ ಸಗನೇಗೌಡ, ಕೆಂಗೇಗೌಡ, ಸಣ್ಣೇಗೌಡ, ಅಚ್ಚುತರಾವ್, ಮೊಗಣ್ಣಗೌಡ ಮತ್ತಿತರರು ಹಾಜರಿದ್ದರು.
