ಚಿಕ್ಕಮಗಳೂರು: ಜಿಲ್ಲೆಯ ಸಾಮಾಜಿಕ ಕಳಕಳಿಯ ಯುವ ನಾಯಕ ಸಂತೋಷ್ ಕೋಟ್ಯಾನ್ ಅವರನ್ನು ಗಡಿಪಾರು ಮಾಡುವ ಚಿಂತನೆಯನ್ನು ಕೈಬಿಡುವಂತೆ ಮಯೂರ ಯುವ ಸೇನೆ ಜಿಲ್ಲಾಧ್ಯಕ್ಷ ರಾಘವೇಂದ್ರ ಮತ್ತಾವರ ಒತ್ತಾಯಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಮಗಳೂರು ಮೊದಲಿನಿಂದಲೂ ಸಾಮಾಜಿಕ, ರಾಜಕೀಯ ಹೋರಾಟಗಳ ನೆಲ. ಅನೇಕ ದಶಕಗಳಿಂದ ಹತ್ತಾರು ಹೋರಾಟಗಳನ್ನು, ಹೋರಾಟಗಾರರನ್ನು ಕಂಡಿರುವ ಜಿಲ್ಲೆಯಾಗಿದೆ ಎಂದು ಹೇಳಿದರು.

ಸಂತೋಷ್ ಕೋಟ್ಯಾನ್ ಅವರು ಕಾಲೇಜು ದಿನಗಳಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕರಾಗಿ, ಬಜರಂಗದಳ ಸಹ ಸಂಯೋಜಕರಾಗಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಇದೀಗ ಅಧ್ಯಕ್ಷರಾಗಿ ಕಳೆದ 15 ವರ್ಷಗಳಿಂದ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಚಟುವಟಿಕೆಯಿಂದ ಕೂಡಿದ ವ್ಯಕ್ತಿ ಎಂದು ತಿಳಿಸಿದರು.
ಕಳೆದ ಎರಡು ಮೂರು ವರ್ಷಗಳ ಅವಧಿಯಲ್ಲಿ ಸುಮಾರು ಹತ್ತು ಕೇಸುಗಳನ್ನು ಇವರ ಮೇಲೆ ದಾಖಲು ಮಾಡಲಾಗಿದೆ. ಇದೇ ಆಧಾರವಾಗಿರಿಸಿ ಇದೀಗ ಗಡಿಪಾರು ಸಂಬಂಧಿಸಿದ ನೋಟಿಸ್ ಕೂಡ ಜಾರಿಗೊಳಿಸಲಾಗಿದ್ದು, ಇದನ್ನು ಎಲ್ಲಾ ಸಂಘಟನೆಗಳು ಖಂಡಿಸಿದ್ದು, ಸಂತೋಷ್ ಕೋಟ್ಯಾನ್ ಅವರನ್ನು ಗಡಿಪಾರು ಮಾಡಬಾರದು ಎಂದು ಆಗ್ರಹಿಸಿದರು.
ಸಮಾಜದಲ್ಲಿ ಯುವಕರು ಮುಂದಿನ ದಿನದಲ್ಲಿ ಸಮಾಜಮುಖಿ ಕೆಲಸ ಮಾಡಲು ಭಯಪಡುವ ಪರಿಸ್ಥಿತಿ ಎದುರಾಗುತ್ತಿದೆ. ಇಲ್ಲಸಲ್ಲದ ಆರೋಪ ಮಾಡಿ ಪುರಾವೆ ಇಲ್ಲದೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವುದು, ಸುಲಿಗೆ ಮಾಡಿರುವುದು, ಗೌರವಾನ್ವಿತ ವ್ಯಕ್ತಿಗೆ ಬೆದರಿಕೆ ಹಾಕುವುದು ಸೇರಿದಂತೆ ಇನ್ನಿತರ ಕಾರಣಗಳನ್ನು ನೀಡಿ ಅವರನ್ನು ಗಡಿಪಾರು ಮಾಡುವ ಹುನ್ನಾರ ನಡೆಸುತ್ತಿರುವುದು ಖಂಡನೀಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಯೂರ ಯುವಸೇನೆ ಉಪಾಧ್ಯಕ್ಷ ಬಿ.ಸಿ.ಪುನೀತ್, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುಮಂತ್, ಕರವೇ ಕನ್ನಡಸೇನೆ ಜಿಲ್ಲಾಧ್ಯಕ್ಷ ಸಚ್ಚಿದಾನಂದ ನಾಡಿಗ, ನಮ್ಮ ಕರವೇ ಜಿಲ್ಲಾ ಖಜಾಂಚಿ ನವೀನ್, ಮುಖಂಡ ಧನುಷ್ ರಾಂಪುರ ಉಪಸ್ಥಿತರಿದ್ದರು.
