Friday, February 13, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಸೆ.1ರಿಂದ ಆನ್‌ಲೈನ್‌ ಬುಕ್ಕಿಂಗ್‌ ಕಡ್ಡಾಯ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಸೆ.1ರಿಂದ ಆನ್‌ಲೈನ್‌ ಬುಕ್ಕಿಂಗ್‌ ಕಡ್ಡಾಯ

ಚಿಕ್ಕಮಗಳೂರು: ವಾಹನ ದಟ್ಟಣೆ ನಿಯಂತ್ರಣ ಮತ್ತು ನಿಸರ್ಗ ತಾಣಗಳ ಸಂರಕ್ಷಣೆ ದೃಷ್ಠಿಯಲ್ಲಿಟ್ಟುಕೊಂಡು ತಾಲ್ಲೂಕಿನ ಗಿರಿ ತಪ್ಪಲಿನ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸೆಪ್ಟೆಂಬರ್ 1 ರಿಂದಲೇ ಆನ್‌ಲೈನ್ ಬುಕ್ಕಿಂಗ್ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜು ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಗಿರಿ ಭಾಗದಲ್ಲಿ ಪ್ರವಾಸಿ ವಾಹನಗಳ ದಟ್ಟಣೆ ನಿಯಂತ್ರಣ ಮತ್ತು ನಿಸರ್ಗದ ನಡುವೆ ಸಮತೋಲನ ಸಾಧಿಸುವುದು ಅಗತ್ಯವಿದೆ ಈ ಕಾರಣಕ್ಕಾಗಿ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೆ ಬರುತ್ತಿದೆ. ಇದರ ಹಿಂದೆ ಯಾರನ್ನೂ ನಿರ್ಬಂಧಿಸುವ ಉದ್ದೇಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಗಿರಿ ತಪ್ಪಲಿನಲ್ಲೂ ಅತೀ ಹೆಚ್ಚು ಮಳೆ ಸುರಿಯುತ್ತಿದೆ. ಆಗಸ್ಟ್ ವೇಳೆಗಾಗಲೇ ವರ್ಷದ ವಾಡಿಕೆ ಮಳೆಗಿಂತ ಹೆಚ್ಚು ಮಳೆ ಸುರಿದಿದೆ. ಇನ್ನೂ ಮಳೆಯ ದಿನಗಳು ಇವೆ. ಈ ಕಾರಣಕ್ಕೆ ನೈಸರ್ಗಿಕ ವಿಪತ್ತುಗಳು ಸಂಭವಿಸುವ ಸಾಧ್ಯತೆಗಳೂ ಇವೆ. ಈಗಾಗಲೇ ನಾವು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞರಿಂದ ಇಲ್ಲಿನ ಮಣ್ಣು ಪರೀಕ್ಷೆ ಮಾಡಿಸಿದ್ದೇವೆ. ತಜ್ಞರ ಪ್ರಕಾರ ಗಿರಿ ಪ್ರದೇಶದಲ್ಲಿ ನಿರು ಇಂಗುವಿಕೆ ಸಾಮರ್ಥ್ಯ ಕಡಿಮೆ ಆಗುತ್ತಿದೆ. ಈ ಕಾರಣಕ್ಕೆ ಮಣ್ಣು ಕುಸಿಯುವ ಪ್ರಕರಣಗಳು ಹೆಚ್ಚಾಗುತ್ತಿದೆ. ಒಂದು ಮರ ಉರುಳಿದರೆ ದೊಡ್ಡ ಪ್ರಮಾಣದ ಮಣ್ಣು ಗುಡ್ಡದಿಂದ ಜರುತ್ತಿದೆ ಎಂದು ತಿಳಿಸಿದರು.

ಇದರ ನಡುವೆ ಪ್ರವಾಸಿ ವಾಹನಗಳ ದಟ್ಟಣೆ ಹೆಚ್ಚಾಗಿ ಭೂಮಿ ಅದುರುವ ಕಾರಣ ಇನ್ನಷ್ಟು ಕುಸಿತಗಳು ಉಂಟಾಗುವ ಸಾಧ್ಯತೆಗಳಿರುತ್ತದೆ. ಕಳೆದ ವರ್ಷ ಗಿರಿ ಪ್ರದೇಶದಲ್ಲಿ ೨೦ ಕಡೆಗಳಲ್ಲಿ ಭೂ ಕುಸಿತ ಸಂಭವಿಸಿದೆ. ಈ ವರ್ಷ ಈ ವೇಳೆಗಾಗಲೆ ೯ ಕಡೆಗಳಲ್ಲಿ ಭೂ ಕುಸಿತ ಉಂಟಾಗಿದೆ ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು.

ನಮ್ಮ ಸಮೀಕ್ಷೆ ಪ್ರಕಾರ ವಾರದ ದಿನಗಳಲ್ಲಿ ಸರಾಸರಿ ಪ್ರತಿದಿನ ೭೫೦ ಪ್ರವಾಸಿ ವಾಹನಗಳು ಗಿರಿ ಭಾಗಕ್ಕೆ ಬಂದು ಹೋಗುತ್ತವೆ. ವಾರಾಂತ್ಯದ ರಜೆ ದಿನಗಳಲ್ಲಿ ಮಾತ್ರ ಸುಮಾರು ೨೦೦೦ ಕ್ಕೂ ಹೆಚ್ಚು ವಾಹನಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿದಿನ ೨ ಸ್ಲ್ಯಾಟ್‌ಗಳಲ್ಲಿ ತಲಾ ೬೦೦ ವಾಹನಗಳಂತೆ ೧೨೦೦ ವಾಹನಗಳಿಗೆ ಮಾತ್ರ ಗಿರಿ ಪ್ರದೇಶಕ್ಕೆ ಬಿಡಲಾಗುವುದು ಅವರು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಂಡು ಬರಬೇಕಾಗುತ್ತದೆ ಎಂದು ತಿಳಿಸಿದರು.

ಅಲ್ಲದೆ ಗಿರಿ ಪ್ರದೇಶಗಳಲ್ಲದೆ ಜಿಲ್ಲೆಯ ದೇವರ ಮನೆ ಅಯ್ಯನಕೆರೆ, ಕೆಮ್ಮಣ್ಣುಗುಂಡಿ, ಭದ್ರಾ ಹಿನ್ನೀರು ಹೀಗೆ ಬೇರೆ ಬೇರೆ ಕಡೆಗೆ ಪ್ರವಾಸಿಗರು ಬೇಟಿ ಮಾಡಬಹುದಾಗಿದೆ. ಇದರಿಂದ ಗಿರಿ ಪ್ರದೇಶದ ಮೇಲೆ ಒತ್ತಡ ಕಡಿಮೆ ಆಗಲಿದೆ ಎಂದು ಹೇಳಿದರು.

ಪ್ರತಿದಿನ ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ೬೦೦ ವಾಹನಗಳು ಮಧ್ಯಾಹ್ನ ೧ ರಿಂದ ಸಂಜೆ ೬ ಗಂಟೆಯವರೆಗೆ ೬೦೦ ವಾಹನಗಳು ಹೀಗೆ ಎರಡು ಸ್ಲಾಟ್‌ಗಳಲ್ಲಿ ದಿನವಹಿ ಒಟ್ಟು ೧೨೦೦ ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಇವುಗಳಲ್ಲಿ ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾಗಳ ಸಂಖ್ಯೆಯನ್ನು ೧೦೦ಕ್ಕೆ ಮತ್ತು ಸ್ಥಳೀಯ ಹಳದಿ ಬಣ್ಣದ ಬೋರ್ಡ್ ಹೊಂದಿರುವ ಟ್ಯಾಕ್ಸಿಗಳ ಸಂಖ್ಯೆಯನ್ನು ೧೦೦ಕ್ಕೆ ಮಿತಿಗೊಳಿಸಲಾಗಿದೆ. ಟೆಂಪೊ ಟ್ರಾವೆಲ್ಲರ್‌ಗಳ ಸಂಖ್ಯೆಯನ್ನು ೫೦ಕ್ಕೆ ಹಾಗೂ ೧೦ ಆಸನಗಳ ಟೂಫಾನ್ ವಾಹನಗಳ ಸಂಖ್ಯೆಯನ್ನು ೫೦ಕ್ಕೆ ಮಿತಿಗೊಳಿಸಲಾಗಿದೆ, ಪ್ರವಾಸಿಗರ ಕಾರು, ಜೀಪು ಹಾಗೂ ಎಸ್.ಯು.ವಿ.ಗಳ ಸಂಖ್ಯೆಯನ್ನು ೩೦೦ಕ್ಕೆ ಮಿತಿಗೊಳಿಸಲಾಗಿದೆ. ಆನ್‌ಲೈನ್ ಮೂಲಕ ಪ್ರವೇಶ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ, ಜಿ.ಪಂ. ಉಪ ಕಾರ್ಯದರ್ಶಿ ಗೌರವ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!