ಚಿಕ್ಕಮಗಳೂರು: ಕಾಳು ಮೆಣಸು ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿತರನ್ನು ಬಂಧಿಸಿ 1.2 ಲಕ್ಷ ರೂ ಮೌಲ್ಯದ 195 ಕೆಜಿ ಕಾಳುಮೆಣಸು, ಕೃತ್ಯಕ್ಕೆ ಬಳಸಿದ 3 ಲಕ್ಷ ರೂ ಮೌಲ್ಯದ ಹುಂಡೈ ಕಾರು ಹಾಗೂ 10ಸಾವಿರ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗ್ರಾಮಾಂತರ ಪೊಲೀಸರಿಗೆ ಅಕ್ಟೋಬರ್ 5 ರಂದು ಎನ್.ಸಿ. ನಾಗರಾಜು ಎಂಬುವರು ದಾಸರಹಳ್ಳಿ ತೋಟದ ಮನೆಯಲ್ಲಿಟ್ಟಿದ್ದ 1.20 ಲಕ್ಷ ರೂ. ಬೆಲೆ ಬಾಳುವ 195 ಕೆಜಿ ಕಾಳುಮೆಣಸನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ್ದರು.
ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಕದ್ದಮಾಲನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಮ್ ಅಮಟೆ,ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಸಿ.ಟಿ.ಜಯಕುಮಾರ್, ಡಿವೈಎಸ್ಪಿ ಶೈಲೆಂದ್ರ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಸಚಿನ್ ಕುಮಾರ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕ ಎಸ್.ವಿ. ರಘುನಾಥ, ಸಿಬ್ಬಂದಿಗಳಾದ ಲೋಹಿತ್, ರಮೇಶ, ಲಕ್ಷ್ಮಣ, ಕಿರಣ, ಶಿವರಾಜ, ಶಶಿಧರ ಮತ್ತು ವಿನಾಯಕ ರನ್ನೊಳಗೊಂಡ ಅಪರಾಧ ಪತ್ತೆ ಕಾರ್ಯದ ತನಿಖಾ ತಂಡವನ್ನು ರಚಿಸಲಾಗಿತ್ತು.
ಆರೋಪಿಗಳಾದ ಪ್ರಜ್ವಲ್, ಸುನಿಲ್ ಎಂಬುವರನ್ನು ವಶಕ್ಕೆ ಪಡೆದ ಪೊಲೀಸರು.ಮೆಣಸು ಕಳವು ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಆರೋಪಿತರನ್ನು, ಕದ್ದಮಾಲನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸುವಲ್ಲಿ ಶ್ರಮಿಸಿದ ಅಪರಾಧ ಪತ್ತೆ ಕಾರ್ಯದ ತನಿಖಾ ತಂಡದಲ್ಲಿದ್ದ ಅಧಿಕಾರಿ ಸಿಬ್ಬಂದಿಯವರ ಕರ್ತವ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
