ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮನುಷ್ಯತ್ವ ಮರೆತು ನಡೆಯುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ ಕಾರಣವೇನೆಂದರೆ ರೈತನೊಬ್ಬ ತಾನು ಬೆಳೆದ ತರಕಾರಿಯನ್ನು ಚಿಕ್ಕಮಗಳೂರು ಎಪಿಎಂಸಿಯಲ್ಲಿ ಮಾರಾಟ ಮಾಡಿ ಹಣ ಪಡೆದು ಊರಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ತಾವು ಸಖರಾಯಪಟ್ಟಣಕ್ಕೆ ತೆರಳುತಿದ್ದ ಲಕ್ಯಾವರೆಗೆ ರೈತನಿಗೆ ಡ್ರಾಪ್ ಕೊಡುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಮಾರ್ಗ ಮಧ್ಯದಲ್ಲಿ ರೈತನ ಬಳಿಯಿಂದ ಹಣ ಕಸಿದುಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಕುರಿಚಿಕ್ಕನಹಳ್ಳಿಯ ನಿಂಗೇಗೌಡ ಹಣ ಕಳೆದುಕೊಂಡ ರೈತ. ನಿಂಗೇಗೌಡ ತಾವು ಬೆಳೆದ ಆಲೂಗಡ್ಡೆ ಹಾಗೂ ಬೀನ್ಸ್ ಅನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಿ ಅದರ ಬಾಬ್ತು 50 ಸಾವಿರ ಹಣ ಪಡೆದು ಮಂಗಳವಾರ ಮುಂಜಾನೆ 5.30ಕ್ಕೆ ತಮ್ಮ ಊರಿಗೆ ತೆರಳಲು ಎಐಟಿ ಸರ್ಕಲ್ ಬಳಿ ಬಸ್ಸಿಗೆ ಕಾಯುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಅಪರಿಚಿತರಿಬ್ಬರು ನಿಂಗೇಗೌಡರನ್ನು ಮಾತನಾಡಿಸಿದ್ದಾರೆ.
ಈ ವೇಳೆ ಅವರು ತಾವು ಕುರಿಚಿಕ್ಕನಹಳ್ಳಿಗೆ ಹೋಗಲು ಬಸ್ಸಿಗೆ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಆಗ ಬೈಕ್ ನಲ್ಲಿ ಬಂದವರು ನಾವು ಸಖರಾಯಪಟ್ಟಣಕ್ಕೆ ತೆರಳುತ್ತಿದ್ದು ಮಾರ್ಗ ಮಧ್ಯೆ ನಿಮ್ಮ ಊರಿಗೆ ಬಿಡುತ್ತೇವೆ ಎಂದು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ.
ನಗರವನ್ನು ದಾಟಿ ಕಣಿವೆ ದೇವಾಸ್ಥಾನದ ಬಳಿ ಹೋಗುತ್ತಿದ್ದಂತೆ ಬೈಕ್ ನಿಲ್ಲಿಸಿದ ದುಷ್ಕರ್ಮಿಗಳು ನಿಂಗೇಗೌಡ ಅವರ ಮೇಲೆ ಹಲ್ಲೆ ನಡೆಸಿ ಅವರ ಜೇಬಿನಲ್ಲಿದ್ದ 50 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

