ಚಿಕ್ಕಮಗಳೂರು: ಹೃದಯಾಘಾತ ತಡೆಯುವ ಜೊತೆಗೆ ಪ್ರತಿ ನಾಡಿ ಮಿಡಿತವು ಕೆಲಸ ಮಾಡಬೇಕೆಂಬುದು ಹಾಗೂ ಜನಜಾಗೃತಿ ಮೂಡಿಸುವುದೇ ವಿಶ್ವ ಹೃದಯ ದಿನಾಚಾರಣೆಯ ಉದ್ದೇಶ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.
ಅವರು ಇಂದು ನಗರದ ಕೆ.ಆರ್.ಎಸ್ ಆಸ್ಪತ್ರೆಯಲ್ಲಿ ಐಸಿರಿ ಫೌಂಡೇಶನ್, ಕೆ.ಆರ್.ಎಸ್ ಆಸ್ಪತ್ರೆ, ಪ್ರಜಾಪಿತಾ ಬ್ರಹ್ಮಕುಮಾರಿಸ್ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಹೃದಯ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವೈದ್ಯ ಯೋಗೀಶ್ ರವರು ಒಂದು ಸಾವಿರಕ್ಕೂ ಹೆಚ್ಚು ಕೆ.ಆರ್.ಎಸ್ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆ ನೀಡಿದ್ದಾರೆ, ಹೃದಯಘಾತ ತಡೆಗೆ ಪೂರಕವಾದ ವೈದ್ಯರ ಸಲಹೆಯನ್ನು ಪ್ರತಿಯೊಬ್ಬರು ಚಾಚು ತಪ್ಪದೆ ಪಾಲಿಸಬೇಕೆಂದು ಮನವಿ ಮಾಡಿದರು.
ದಿನ ನಿತ್ಯ ವಿಶ್ರಾಂತಿ ಇಲ್ಲದೆ ದುಡಿಯುವ ಮಿಡಿಯುವ ಹೃದಯಕ್ಕೆ ನಾವು ಏನು ಕೊಡಬೇಕಾಗಿಲ್ಲ, ಪ್ರತಿ ದಿನ ೧ ಗಂಟೆ ನಡೆಯುವುದು, ಯೋಗ, ಪ್ರಾಣಾಯಾಮ ಮಾಡುವ ಮೂಲಕ ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳ ತಡೆಗೆ ಸಹಕಾರಿಯಾಗಲಿದೆ ಎಂದರು.
ಮಾದಕ ವ್ಯಸನಿಗಳು ಇದರಿಂದ ಮುಕ್ತವಾಗಬೇಕು ಜೊತೆಗೆ ವೈದ್ಯರ ಸಲಹೆಯನ್ನು ಪಡೆದು ಉತ್ತಮ ಆರೋಗ್ಯಕ್ಕೆ ಪೂರಕವಾದ ನೈಸರ್ಗಿಕ ಆಹಾರ ಮುಖ್ಯವಾಗಿ ಪಡೆಯಬೇಕು, ಈಗ ಕಲುಷಿತ ಪದಾರ್ಥಗಳ ಆಹಾರ ಸೇವನೆಯಿಂದಾಗಿ ರೋಗರುಜಿನಗಳಿಗೆ ಕಾರಣವಾಗುತ್ತಿದೆ ಎಂದು ವಿಷಾಧಿಸಿದರು.
ಹೃದಯದ ಆರೋಗ್ಯದ ಜೊತೆಗೆ ದೇಹದ ಎಲ್ಲಾ ಅಂಗಾಂಗಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಾದರೆ ವೈದ್ಯರ ಸಲಹೆಯನ್ನು ಪಡೆಯಬೇಕು, ಇದಕ್ಕೆ ಪೂರಕವಾಗಿ ವ್ಯಾಯಾಮ ಮಾಡಿದಾಗ, ಬೊಜ್ಜು, ಮದುಮೇಹ ಕಡಿಮೆಯಾಗಿ ಜೀವನ ಶೈಲಯ ಜಡತ್ವ ಹೋಗುತ್ತದೆ ಎಂದರು.
ಆರೋಗ್ಯ ಪೂರ್ಣ ಸದೃಢ ದೇಹ ಹೊಂದಿದಾಗ ಮಾತ್ರ ಉತ್ತಮವಾಗಿ ಜೀವನ ನಡೆಸಲು ಸಾದ್ಯ ಹಣ ತಿನ್ನಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಉತ್ತಮವಾದ ಆಹಾರ ಪದ್ಧತಿ ಬಹಳ ಮುಖ್ಯ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಹೃದಯ ತಜ್ಞ ಡಾ. ಶ್ರೀಧರ್ ಮಾತನಾಡಿ ಹೃದಯ ಸಂಬಂದಿ ಕಾಯಿಲೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹೃದಯಘಾತ ತಡೆಯುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ವಿಶ್ವ ಹೃದಯ ದಿನದ ಉದ್ದೇಶ ಎಂದರು.
ಚಿಕ್ಕ ವಯಸ್ಸಿನಲ್ಲಿಯೇ ಇಂದು ಹೃದಯಘಾತದಿಂದ ಸಾವುಗಳಾಗುತ್ತಿದೆ ಇದರಿಂದಾಗಿ ಆ ಕುಟುಂಬದ ಇಡೀ ಜೀವನಪರ್ಯಂತ ತೊಂದರೆಗೊಳಗಾಗುತ್ತಿದೆ ಆದ್ದರಿಂದ ದೇಹ ದಂಡಿಸುವ ಯೋಗ, ನಡಿಗೆಯಲ್ಲಿ ತೊಡಗಬೇಕು, ಮದ್ಯ, ಬೀಡಿ-ಸಿಗರೇಟ್ ಮುಂತಾದವುಗಳಿಂದ ವ್ಯಸನ ಮುಕ್ತವಾದಾಗ ಆರೋಗ್ಯಪೂರ್ಣ ಸಮಾಜಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಮುಂದಿನ 10 ವರ್ಷಗಳಲ್ಲಿ ಈ ರೀತಿಯ ಎಲ್ಲಾ ವ್ಯಸನಗಳಿಂದ ಮುಕ್ತ ಹಾಗೂ ಒತ್ತಡ ಕೊನೆಯಾದಾಗ ಮಾತ್ರ ರೋಗರಹಿತ ದೇಹ ಹೊಂದಲು ಸಾದ್ಯ ಎಂದ ಅವರು ರೋಗಗಳ ನಿಯಂತ್ರಣಕ್ಕೆ ಕನಿಷ್ಠ ಅರ್ಧ ಗಂಟೆಯಾದರು ವ್ಯಾಯಾಮ, ನಡಿಗೆ ಬಹಳ ಮುಖ್ಯ ಎಂದು ತಿಳಿಸಿದರು.
ರೋಗಗಳು ಕಡಿಮೆಯಾಗಬೇಕಾದರೆ ಪ್ರತಿಯೊಬ್ಬರು ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಮಾಡಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಾಗ ಹೃದಯಘಾತದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಹುದು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ, ಡಿ.ಹೆಚ್.ಓ ಡಾ. ಅಶ್ವಥ್ ಬಾಬು, ಜಿಲ್ಲಾ ಸರ್ಜನ್ ಚಂದ್ರಶೇಖರ್, ಡಾ. ಪ್ಯಾಟ್ರಿಕ್, ಡಾ. ವಿನಯ್, ಡಾ. ಮಲ್ಲಿಕಾರ್ಜುನ್, ಹಾಗೂ ಪ್ರಜಾಪಿತಾ ಬ್ರಹ್ಮಕುಮಾರಿಸ್ನ ಸಂಚಾಲಕಿ ಭಾಗ್ಯಕ್ಕ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಡಾ. ಯೋಗೀಶ್ ಸ್ವಾಗತಿಸಿದರು.
