ಚಿಕ್ಕಮಗಳೂರು: ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಸಾವಿರಾರು ಸಂಖ್ಯೆಯ ಜೇನು ಗೂಡುಗಳನ್ನು ತೆರವುಗೊಳಿಸುವ ಭರದಲ್ಲಿ ಸಾವಿರಾರು ಜೇನು ಹುಳುಗಳು ಸತ್ತಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ನಗರದ ಹೊರವಲಯದಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಜೇನು ಗೂಡು ಕಟ್ಟಿತ್ತು. ತೊಂದರೆ ನೀಡುತ್ತದೆ ಎಂದು ಕಾಲೇಜು ಆಡಳಿತ ಮಂಡಳಿಯು ಗೂಡುಗಳನ್ನು ತೆರವುಗೊಳಿಸಲು ಮುಂದಾಗಿದೆ.

ಗೂಡುಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ನಿಯಮಾನುಸಾರ ಹೊಗೆ ಹಾಕಿ ಸ್ಥಳಾಂತರಿಸುವ ಬದಲು, ರಾಸಾಯನಿಕ ಸ್ಪೇ ಬಳಸಿ ತೆರವುಗೊಳಿಸಿರುವುದರಿಂದ ಸಾವಿರಾರು ಜೇನು ಹುಳುಗಳು ಸಾವನಪ್ಪಿವೆ.
ಪರಿಸರ ಸ್ನೇಹಿಯಾಗಿರಬೇಕಾದ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಜೇನು ಹುಳುಗಳ ಪ್ರಾಣ ತೆಗೆದಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ರಾಸಾಯನಿಕ ಸಿಂಪಡಿಸಿ ಈ ಕೃತ್ಯ ನಡೆಸಿರುವುದು ಅಮಾನವೀಯ ಘಟನೆಯಾಗಿದೆ.
