ಚಿಕ್ಕಮಗಳೂರು: ಜಿಲ್ಲಾಡಳಿತ ವತಿಯಿಂದ ನಗರದ ಕುವೆಂಪು ಕಲಾಮಂದಿರದ ಹೇಮಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿದರು.

ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದ ಅವರು, ಶಿವಶರಣ ಹಡಪದ ಅಪ್ಪಣ್ಣನವರಂತಹ ಮಹಾನುಭಾವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಇವರು ಎಲ್ಲಾ ಸಮಾಜದ ಮಾತ್ರವಲ್ಲ, ಇಡೀ ರಾಷ್ಟ್ರದ ಆಸ್ತಿ. ಇವರ ವಿಚಾರಧಾರೆಗಳನ್ನು ನಾವು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಹೇಳಿದರು.
12ನೇ ಶತಮಾನದಲ್ಲಿ ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲೂ ಬಸವಣ್ಣನವರಿಗೆ ಆಪ್ತ ಕಾರ್ಯದರ್ಶಿಗಳಾಗಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದರು. ಬಸವಣ್ಣನವರ ಆಸ್ಥಾನದಲ್ಲಿ ಅವರು ಪ್ರಾಮಾಣಿಕತೆ, ಸ್ವಾಮಿನಿಷ್ಠೆಯೊಂದಿಗೆ ಕರ್ತವ್ಯ ಪರಿಪಾಲನೆ ಮಾಡಿದ್ದರು ಆದರೆ ಅಪಾರವಾದ ಜ್ಞಾನ ಶಕ್ತಿ, ತಿಳುವಳಿಕೆ ಮುಖಾಂತರ ಸಮಾಜವನ್ನು ಎಚ್ಚರಿಸಿದರು ಉತ್ತಮವಾದ ಸಮಾಜವನ್ನು ಕಟ್ಟಿದರು ಎಂದು ಹೇಳಿದರು.
ಅಪಾರ ಭಕ್ತಿ ಜ್ಞಾನವುಳ್ಳವರಾಗಿದ್ದ ಅಪ್ಪಣ್ಣನವರು ಕಾಯಕ ಜೀವಿಗಳಾಗಿ ಕ್ಷೌರ ವೃತ್ತಿಯನ್ನು ನಡೆಸಿಕೊಂಡು ಹೋಗುತ್ತಿದ್ದ ಶರಣರು. ಮಾಡುವ ಕಾಯಕ ಯಾವುದಾದರೂ ಅದು ಮೇಲೂ ಅಲ್ಲ, ಕೀಳೂ ಅಲ್ಲ, ತನು, ಮನ, ಧನವೆಂಬ ತ್ರಿಕರಣ ಶುದ್ಧವಾಗಿ ಮಾಡುವುದೇ ಕಾಯಕ ಎಂದು ಭಾವಿಸಿದ್ದರು.
ನಗರಸಭೆ ಅಧ್ಯಕ್ಷೆ ಬಿ.ಶೀಲಾ ದಿನೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪತಹಸೀಲ್ದಾರ್ ರಾಮ್ರಾವ್ ದೇಸಾಯಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ವಿಶ್ವನಾಥ್ ಸಂಕಲ್ಪ, ಕರ್ನಾಟಕ ರಾಜ್ಯ ಸವಿತಾ ಸಮಾಜ ಜಿಲ್ಲಾಧ್ಯಕ್ಷ ಎಸ್.ಎನ್ ಮಹಾಲಿಂಗಪ್ಪ, ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಸತ್ಯನಾರಾಯಣ, ಗೌರವಾಧ್ಯಕ್ಷ ಎನ್.ಸತೀಶ್, ಉಪಾಧ್ಯಕ್ಷ ಟಿ.ಪಿ.ವಿಜಯ್ ಕುಮಾರ್, ಆರ್ಯ ನಯನ ಕ್ಷತ್ರಿಯ ಶ್ರೀ ರಾಮ ಮಂದಿರ ಸವಿತಾ ಸಮಾಜದ ಅಧ್ಯಕ್ಷ ಯೋಗೀಶ್ ಹಾಗೂ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.