ಚಿಕ್ಕಮಗಳೂರು: ರಾಷ್ಟ್ರೀಯ ಸಾರ್ವಭೌಮತ್ವ, ಜನರ ಜೀವನಕ್ಕೆ ಧಕ್ಕೆ ತರುವ ಎಲ್ಲಾವ್ಯಾಪಾರ ಮಾತುಕತೆಗಳನ್ನು ಕೇಂದ್ರಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾದ ವತಿಯಿಂದ ಬುಧವಾರ ತಾಲೂಕು ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ಟ್ರಂಪ್ ಬೆದರಿಕೆಗೆ ಮತ್ತು ಐರೋಪ್ಯ ಒಪ್ಪಂದದ ವಿರುದ್ಧ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಭಾರತ ಅಡಿಯಾಳಾಗುತ್ತಿದ್ದು, ಕೇಂದ್ರ ಸರ್ಕಾರದ ವ್ಯಾಪಾರ ಒಪ್ಪಂದ ನೀತಿಯನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತಿ ಕಿಸಾನ್ ಮೋರ್ಚಾ ಮತ್ತು ರೈತ ಸಂಘದ ಮುಖಂಡರು ಹೇಳಿದರು.
ಭಾರತೀಯ ಸರಕಿನ ಮೇಲೆ ಶೇ.೩೫ ರಷ್ಟು ಸುಂಕ ವಿಧಿಸುವ, ರಷ್ಯಾದೊಂದಿಗೆ ತೈಲ ವ್ಯಾಪಾರದ ಮೇಆಲೆ ದಂಡನಾತ್ಮಕ ತೆರಿಗೆ ವಿಧಿಸುವ ಟ್ರಂಪ್ ಬೆದರಿಕೆಯನ್ನು ಆರ್ಥಿಕ ದಬ್ಬಾಳಿಕೆ ಎಮದು ಮನಗಾಣಬೇಕಾಗಿದೆ. ಭಾರತ ರಷ್ಯಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ತ್ಯಜಿಸುವಂತೆ ಬಲವಂತವಾಗಿ ಹೇರಿಕೆ ಮಾಡಲಾಗುತ್ತಿದೆ. ಇದನ್ನು ಭಾರತ ತಿರಸ್ಕರಿಸಬೇಕೆಂದು ಒತ್ತಾಯಿಸಿದರು.
ವಿದೇಶಿ ಹಸ್ತಕ್ಷೇಪವಿಲ್ಲದೆ ಯಾವುದೇ ದೇಶದೊಂದಿಗೆ ವ್ಯಾಪರವನ್ನು ತೊಡಗಿಸಿಕೊಳ್ಳುವ ತನ್ನ ಸಾರ್ವಭೌಮ ಹಕ್ಕನ್ನು ಭಾರತ ಪ್ರತಿಪಾದಿಸಬೇಕು. ಅಮೇರಿಕದ ನಡೆಎದುರು ಕೇಂದ್ರ ಸರ್ಕಾರ ಮೌನವಾಗಿರುವುದು ಸಾಮ್ರಾಜ್ಯಶಾಹಿ ದೇಶಗಳಿಗೆ ಶರಣಾಗತಿ ಎಂದು ನಾವೆಲ್ಲ ತಿಳಿದುಕೊಳ್ಳಬೇಕಾಗುತ್ತದೆ ಎಂದು ತಹಸೀಲ್ದಾರ್ಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.
ದೇಶದ ರೈತರ ಜೀವನೋಪಾಯವನ್ನು ಧ್ವಂಸಗೊಳಿಸಲಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕಬಳಿಕೆಗೆ ಅನುವುಮಾಡಿಕೊಡಲಾಗುತ್ತಿದೆ. ಸಾರ್ವಜನಿಕ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಔಷಧಿಕ್ಷೇತ್ರದಲ್ಲಿನ ಏಕಸ್ವಾಮ್ಯವನ್ನು ಬಲಪಡಿಸಲಾಗುತ್ತಿದೆ ಇದರಿಂದ ಜನಸಾಮಾನ್ಯರಿಗೆ ಆರೋಗ್ಯ ಸೇವೆ ಕೈಗೆಡುಕದಂತೆ ಕೇಂದ್ರ ಸರ್ಕಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಇತ್ತೀಚೆಗೆ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ನಡೆಸಿದ್ದರೂ ಜನವಿರೋಧಿ ನೀತಿಯನ್ನು ಹಿಂಪಡೆದುಕೊಂಡಿಲ್ಲ, ನೀರು, ಅರಣ್ಯ, ಭೂಮಿ ಮೇಲಿನ ದಾಳಿ ಖಂಡನೀಯವಾಗಿದೆ. ಕಾರ್ಪೋರೇಟ್ ಸಂಸ್ಥೆಗಳಿಗೆ ಭೂ ಕಬಳಿಕೆಯನ್ನು ಅನುವು ಮಾಡಿಕೊಡಲಾಗುತ್ತಿದ್ದು, ಸಾರ್ವಜನಿಕ ಸೇವಾಕ್ಷೇತ್ರವನ್ನು ಖಾಸಗೀಕರಣಗೊಳಿಸುವುದನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಕಷ್ಟಪಟ್ಟುಗಳಿಸಿದ ದೇಶದ ಪ್ರಜಾಪ್ರಭುತ್ವ, ಭದ್ರಬುನಾದಿಯಂತೆ ಹಾಕಿರುವ ಆರ್ಥಿಕ ಅಡಿಪಾಯವನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ದೇಶದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾದ ಜಿಲ್ಲಾ ಸಂಚಾಲಕ ಗೌಸ್ಮೊಹಿಯುದ್ದೀನ್, ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ಪ್ರಧಾನಕಾರ್ಯದರ್ಶಿ ಎಂ.ಬಿ.ಚಂದ್ರಶೇಖರ್, ರೈತ ಮುಖಂಡ ಗುರುಶಾಂತಪ್ಪ, ತಾಲೂಕು ಅಧ್ಯಕ್ಷ ವೈ.ಸಿ.ಸುನಿಲ್ಕುಮಾರ್, ಡಿ.ಆರ್.ಪುಟ್ಟಸ್ವಾಮೇಗೌಡ, ದೇವರಾಜೇಗೌಡ ಇದ್ದರು.
