ಸಕಲೇಶಪುರ : ಗೌರಿ ಹಬ್ಬದ ಹಿನ್ನಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಅವರ ಮನೆಯಲ್ಲಿ ಹಬ್ಬದ ಸಂಭ್ರಮವು ತೋಡಿಕೊಂಡಿತು. ಈ ಸಂದರ್ಭದಲ್ಲಿ ಶಾಸಕರ ಪತ್ನಿ ಪ್ರತಿಭಾ ಮಂಜುನಾಥ್ ಅವರು ಕ್ಷೇತ್ರದ ಪೌರ ಕಾರ್ಮಿಕರಿಗೆ ಹಬ್ಬದ ಊಟ ಬಡಿಸಿ, ಮಹಿಳಾ ಪೌರ ಕಾರ್ಮಿಕರಿಗೆ ವಿಶೇಷವಾಗಿ ಬಾಗಿನ,ಪುರುಷರಿಗೆ ಹೊಸ ಬಟ್ಟೆ ನೀಡಿ ಗೌರವಿಸಿದರು.

ನಂತರ ಮಾತನಾಡಿದ ಶಾಸಕ ಸಿಮೆಂಟ್ ಮಂಜು, “ಕ್ಷೇತ್ರದ ಜನತೆ ಹಾಗೂ ನಾಡಿನ ಜನರಿಗೆ ದೇವರು ಒಳಿತು ಉಂಟು ಮಾಡಲಿ. ಪೌರ ಕಾರ್ಮಿಕರ ಸೇವೆಯು ಸಮಾಜದ ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಲು ಅತ್ಯಂತ ಅಗತ್ಯವಾದದ್ದು. ಯಾವುದೇ ಸಂದರ್ಭದಲ್ಲೂ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಾ ನಗರವನ್ನು ನಿರ್ಮಲವಾಗಿರಿಸುವ ಅವರ ಬದ್ಧತೆ ಶ್ಲಾಘನೀಯ. ಸಮಾಜಕ್ಕೆ ಸೇವೆ ಸಲ್ಲಿಸುವ ಈ ನೈಜ ಕಾಯಕಯೋಗಿಗಳನ್ನು ಗೌರವಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.

ಪೌರ ಕಾರ್ಮಿಕರ ಗೃಹಭಾಗ್ಯಕ್ಕಾಗಿ ಸರ್ಕಾರದ ಹಲವು ಯೋಜನೆಗಳು ಜಾರಿಗೆ ಬಂದಿರುವುದನ್ನು ಉಲ್ಲೇಖಿಸಿದ ಶಾಸಕ, “ನಗರದಲ್ಲಿ ನಿರ್ಮಾಣವಾಗುತ್ತಿರುವ ಪೌರ ಕಾರ್ಮಿಕರ ವಸತಿ ಮನೆಗಳ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಮನೆಗಳ ಹಸ್ತಾಂತರ ವಿಷಯವನ್ನು ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದೇನೆ. ಸರ್ಕಾರ ಪೂರಕವಾಗಿ ಸ್ಪಂದನೆ ನೀಡಿದ್ದು, ಶೀಘ್ರದಲ್ಲೇ ಮನೆಗಳನ್ನು ಹಸ್ತಾಂತರಿಸಲಾಗುವುದು” ಎಂದು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಪುರಸಭಾ ಸದಸ್ಯರಾದ ಪ್ರದೀಪ್, ವನಜಾಕ್ಷಿ, ರೇಖಾ ರುದ್ರ ಕುಮಾರ್, ಪುರಸಭಾ ಮುಖ್ಯಧಿಕಾರಿ ಮಹೇಶ್ವರಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
