ಹಾಸನ: ಜ.13 ರಂದು ಸಕಲೇಶಪುರದ ಮೂಗಲಿ ಗ್ರಾಮದ ಬಳಿ ಶೋಭ ಎಂಬ ಮಹಿಳೆಯನ್ನು ಬಲಿ ಪಡೆದಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿದೆ.

ಶುಕ್ರವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ, ಡ್ರೋನ್ ಸಹಾಯದಿಂದ ಕಾಡಾನೆಯ ಚಲನವಲನ ಪತ್ತೆಹಚ್ಚಿ ಬಂಧನಕ್ಕೆ ಮುಂದಾದರು. ಇಟಿಎಫ್ ಸಿಬ್ಬಂದಿಗಳೊಂದಿಗೆ ಮಾವುತರು ಹಾಗೂ ಕಾವಾಡಿಗರ ಸಹಕಾರದಿಂದ ಶೋಧ ಕಾರ್ಯ ನಡೆಸಲಾಗಿತ್ತು.
ಈ ವೇಳೆ ಕಾಡಾನೆ ಬೇಲೂರು ತಾಲೂಕಿನ ಚಂದಾಪುರ–ಬೆಳ್ಳಾವರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಕಾಡಾನೆಯನ್ನು ಸೆರೆ ಹಿಡಿಯುವ ಸಲುವಾಗಿ ಲಾರಿಯಲ್ಲಿ ಕುಮ್ಮಿ ಸಾಕಾನೆಗಳನ್ನು ಕರೆತರಲಾಗಿದ್ದು, ಧನಂಜಯ, ಸುಗ್ರೀವ, ಶ್ರೀರಾಮ, ಲಕ್ಷ್ಮಣ ಹಾಗೂ ಅಯ್ಯಪ್ಪ ಎಂಬ ಐದು ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು
ಬಂಧನ ಕಾರ್ಯಾಚರಣೆ ವೇಳೆ ಪಶುವೈದ್ಯರಾದ ಡಾ. ರಮೇಶ್ ಅವರು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಅರವಳಿಕೆ ನೀಡಿದ ನಂತರವೂ ಕಾಡಾನೆ ಸುಮಾರು ಎರಡು ಗಂಟೆಗಳ ಕಾಲ ನಿತ್ರಾಣಗೊಳ್ಳದೆ ಓಡಾಡಿದ್ದು, ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳು ನೀರು ಹಾಕಿ ಆರೈಕೆ ಮಾಡಿದ್ದಾರೆ. ನಂತರ ತಜ್ಞರು ಕಾಡಾನೆಗೆ ಹಗ್ಗ ಕಟ್ಟಿ ರಿವರ್ಸಲ್ ಇಂಜೆಕ್ಷನ್ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಐದು ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಸಿದ್ಧರಾಗಿದ್ದಾರೆ.
ಘಟನಾ ಸ್ಥಳದಲ್ಲೇ ಅರಣ್ಯ ಇಲಾಖೆಯ ಡಿಎಫ್ಓ ಸೌರಭ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದರು. ಕಾಡಾನೆಯನ್ನು ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸ್ಥಳಾಂತರ ಮಾಡಲಾಯಿತು. ಪುಂಡಾನೆ ಸೆರೆ ಹಿಡಿದಿದ್ದರಿಂದ ಮಲೆನಾಡು ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
