ಹಾಸನ: ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಗೆ ಪೊಲೀಸರೇ ಆಸರೆಯಾದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಯಕರಹಳ್ಳಿ ಗ್ರಾಮದ ಅಜಯ್ ಹಾಗೂ ಧನಲಕ್ಷ್ಮಿ ಪರಸ್ಪರ ಪ್ರೀತಿಸುತ್ತಿದ್ದರು . ಇವರ ಪ್ರೀತಿಗೆ ಧನಲಕ್ಷ್ಮಿಯ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ರು. ಹೀಗಾಗಿ ಪ್ರೇಮಿಗಳು ಖಾಕಿ ಮೊರೆ ಹೋದಾಗ, ಇಬ್ಬರ ಅಭಿಪ್ರಾಯವನ್ನ ಪಡೆದುಕೊಂಡ ಪೊಲೀಸರು ಪೋಷಕರಿಗೆ ತಿಳಿಹೇಳಿದ್ದಾರೆ.
ಅವರಿಬ್ಬರೂ ಒಪ್ಪಿಗೆ ಮೇರೆಗೆ ಈ ನಿರ್ಧಾರ ಕೈಗೊಳ್ಳುತ್ತಿದ್ದಾರೆ, ತಾವುಗಳು ತೊಂದರೆ ಕೊಡುವುದು ಕಾನೂನು ರೀತಿಯಲ್ಲಿ ಅಪರಾಧವಾಗುತ್ತದೆ ಎಂದು ಕಾನೂನಿನ ಅರಿವು ಮೂಡಿಸುವಲ್ಲಿ ಪೊಲೀಸರು ಯಶಸ್ವಿಯಾದರು. ನಂತರ ಪ್ರೇಮಿಗಳು ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಗೊರೂರು ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾದರು.
ಬಳಿಕ ಪ್ರೇಮಿಗಳು ಪೊಲೀಸ್ ಠಾಣೆಗೆ ತೆರಳಿ , ಸಬ್ ಇನ್ಸ್ಪೆಕ್ಟರ್ ಧನರಾಜ್, ಎ ಎಸ್ ಐ ಶ್ರೀನಿವಾಸ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳಿಗೆ ಸಿಹಿ ನೀಡಿ ಧನ್ಯವಾದ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಧನರಾಜ್, ನವ ಜೋಡಿಗೆ ಶುಭಾಶಯ ತಿಳಿಸಿ ಆದರ್ಶ ಜೀವನ ಮಾಡುವಂತೆ ಬುದ್ಧಿ ಹೇಳಿ ಕಳುಹಿಸಿಕೊಟ್ಟರು.
