ಹಾಸನ: ರಾಜ್ಯದ ಎಲ್ಲೆಡೆ ಮಳೆ ಅಬ್ಬರ ಜೋರಾಗಿದೆ. ಅದರಲ್ಲೂ ಹಾಸನದ ಮಲೆನಾಡು ಭಾಗದಲ್ಲಂತು ಕಳೆದೊಂದು ವಾರದಿಂದ ಮಳೆ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಹಲವೆಡೆ ಭೂಕುಸಿತ, ಗುಡ್ಡ ಕುಸಿತದಂತ ಪ್ರಕರಣಗಳು ವರದಿಯಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದೆ.
ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಲ್ಲಿನ ಜನತೆ ಹೈರಾಣಾಗಿದ್ದಾರೆ. ಸಕಲೇಶಪುರದಲ್ಲಂತೂ ಮಳೆಯ ಅಬ್ಬರ ಹೇಳತೀರದಾಗಿದೆ. ಸತತ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75ರ ಹೆಗ್ಗದ್ದೆ ಬಳಿ ನಿರಂತರವಾಗಿ ಭೂಕುಸಿತ ಉಂಟಾಗುತ್ತಿದೆ. ರಸ್ತೆಗೆ ಭಾರೀ ಪ್ರಮಾಣದ ಮಣ್ಣು ಕುಸಿದಿದ್ದು ಸಂಚಾರಕ್ಕೆ ಅಡಿಪಡಿಸಿದೆ. ಹಾಗೇ ಭುಕುಸಿತದಿಂದ ಗುಡ್ಡದ ಮೇಲಿನ ಚರ್ಚ್ ಹಾಗೂ ಫಾದರ್ ವಾಸದ ಮನೆ ಕುಸಿಯುವ ಭೀತಿ ಉಂಟಾಗಿದೆ.
ಸಕಲೇಶಪುರ ಪಟ್ಟಣದ ಹೊರ ವಲಯದ ಬೈಪಾಸ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿತವಾಗಿದೆ. ಇದರಿಂದ ಮೇಲ್ಬಾಗದ ವಾಸದ ಮನೆಗಳ ಜನರಲ್ಲಿ ಆತಂಕ ಮನೆ ಮಾಡಿದೆ. ಮತ್ತಷ್ಟು ಮಣ್ಣು ಕುಸಿದರೆ ವಾಸದ ಮನೆಗಳಿಗೆ ಹಾನಿಯಾಗುವ ಸಂಭವವಿದೆ. ನಿರಂತರ ಮಳೆಯಿಂದ ಶೀತ ಹೆಚ್ಚಾಗಿ ದೊಡ್ಡ ಬಂಡೆ ಕಲ್ಲಿನ ಜೊತೆ ಮಣ್ಣು ಕುಸಿತ ಉಂಟಾಗಿದೆ. ರಸ್ತೆಯ ಸುರಕ್ಷತೆಗಾಗಿ ನಿರ್ಮಿಸಲಾಗಿದ್ದ ತಡೆಗೋಡೆಗೂ ಹಾನಿ ಉಂಟಾಗಿದೆ.
ಬಿರುಗಾಳಿ ಮಳೆಗೆ ಕುಸಿದ ಶಾಲೆಯ ಗೋಡೆ
ಇತ್ತ, ಮಳೆ, ಗಾಳಿಗೆ ಶಾಲೆಯ ಗೋಡೆ ಹಾಗೂ ಹೆಂಚುಗಳು ಕುಸಿದು ಬಿದ್ದಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಕಡಗರವಳ್ಳಿ ಗ್ರಾಮದಲ್ಲಿ ನಡೆದಿದೆ. ಧಾರಾಕಾರ ಮಳೆಗೆ ಶಾಲೆಯ ಕಟ್ಟಡದ ಗೋಡೆ ಹಾಗೂ ಹೆಂಚುಗಳು ಬಿದ್ದಿದೆ. ಮಳೆ ಹಿನ್ನೆಲೆ ಶಾಲೆಗೆ ರಜೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ.
