ಸಕಲೇಶಪುರ:ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ ಆಶಾ ಕಾರ್ಯಕರ್ತೆಯರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಆಶಾ ಕಾರ್ಯಕರ್ತೆಯರ ಕೆಲಸವು ಸಮಾಜದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವುದು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದಾಗಿದೆ.ಆಶಾ ಕಾರ್ಯಕರ್ತರು ಸಮುದಾಯ ಮತ್ತು ಆರೋಗ್ಯ ವ್ಯವಸ್ಥೆಯ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಈ ನಿಟ್ಟಿನಲ್ಲಿ ಅವರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಸರ್ಕಾರ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವುದು ಬೇಸರದ ವಿಷಯ.ಈ ದಿಸೆಯಲ್ಲಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆ ಗಳನ್ನು ಸರ್ಕಾರದ ಮುಂದಿಟ್ಟು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ತಿಳಿಸಿದರು.ಕಾಫಿ ತೋಟದ ಎಸ್ಟೇಟ್ ಗಳಲ್ಲಿ ಹೊರ ರಾಜ್ಯದ ಕಾರ್ಮಿಕರ ಅರೋಗ್ಯ ಸಮಸ್ಯೆ ತಿಳಿಯಲು ತೆರಳುವ ಆಶಾ ಕಾರ್ಯಕರ್ತರಿಗೆ ಮಾಲೀಕರು ಹಾಗೂ ಕಾರ್ಮಿಕರು ಸೂಕ್ತ ದಾಖಲಾತಿ ನೀಡಿ ಸಹಕರಿಸುವಂತೆ ತಿಳಿಸಿದರು.

ಈ ವೇಳೆ ಶಾಸಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಆಶಾ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ರೂ.2000ರಷ್ಟು ಗೌರವಧನವನ್ನು ಹೆಚ್ಚಿಗೆ ಮಾಡಬೇಕು.ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ ರೂ.5 ಲಕ್ಷ ನೀಡಲು ಕ್ರಮ ವಹಿಸಬೇಕು.ಜನಸಂಖ್ಯೆ ವಿಂಗಡಣೆ ಇದೂ ಸಹ ಎಷ್ಟೋ ಕಡೆಗಳಲ್ಲಿ ಸರಿಯಾಗಿ ತೋರಿಸಲು ಇಲಾಖಾ ಸಿಬ್ಬಂದಿ ಬಿಡುವುದಿಲ್ಲ.

ಇದರಿಂದ ಆಶಾಳಿಗೆ ಅನ್ಯಾಯವಾಗುತ್ತದೆ. ಇದರಿಂದ ಆತಂಕ ಸೃಷ್ಟಿಯಾಗಿದೆ.ಆಶಾಗಳಲ್ಲಿಯೇ ಒಬ್ಬರನ್ನು ಕಳೆದ 10 ವರ್ಷಗಳಿಂದ 20ಆಶಾಗಳಿಗೆ ಒಬ್ಬರಂತೆ ಸುಮರು 2000 ಸುಗಮಕಾರರಾಗಿ ಕೆಲಸಕ್ಕೆ ಪಡೆದುಕೊಂಡು ಧಿಡೀರನೆ ತೆಗೆದು ಹಾಕಿರುವರು.ಆಶಾ ಸುಗಮಕಾರರನ್ನು ಸೂಕ್ತ ವೇತನ ನೀಡಿ, ಮುಂದುವರೆಸುವಂತೆ ಸೇರಿ ಇನ್ನು ಹತ್ತು ಹಲವು ಬೇಡಿಕೆಗಳ ಪರಿಹರಿಸುವಂತೆ ಕೋರಿ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು

ಈ ಸಂಧರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಮಹೇಶ್, ತಾಲೂಕು ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ಭೂಮಿಕಾ ಗೌಡ ಉಪಸ್ಥಿತರಿದ್ದರು.