ಹೊಸನಗರ: ನಾಡಿನ ಮೂಲೆಮೂಲೆಗೂ ಗಣೇಶ ಚತುರ್ಥಿಯ ಹಬ್ಬದ ಕಳೆ–ಗೊಳೆ ಮನೆಮಾಡಿದೆ. ವಿಶೇಷವಾಗಿ ಮಲೆನಾಡಿನ ತೀವ್ರ ಮಳೆಯ ನಡುವೆಯೂ ಸಾರ್ವಜನಿಕ ಗಣೇಶೋತ್ಸವಗಳನ್ನು ಗ್ರಾಮೀಣರು ಅಪಾರ ಉತ್ಸಾಹದಿಂದ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.
ಸುಳುಗೋಡು–ಯಡೂರು ವಿನಾಯಕ ಸೇವಾ ಸಮಿತಿ, ಪ್ರತಿವರ್ಷವೂ ವಿಭಿನ್ನ ಆಕರ್ಷಣೆಗಳ ಮೂಲಕ ಭಕ್ತರ ಮನಗೆದ್ದ ಸಂಸ್ಥೆ. ಹಿಂದಿನ ವರ್ಷ ಮಾಣಿ ಡ್ಯಾಂ ಮಾದರಿಯನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದ ಸಮಿತಿ, ಈ ಬಾರಿ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ಸಿಗಂದೂರು ಸೇತುವೆಯ ಅದ್ಭುತ ಮಾದರಿಯನ್ನು ತಯಾರಿಸಿ ಗಣೇಶೋತ್ಸವಕ್ಕೆ ವಿಶಿಷ್ಟ ಮೆರಗು ನೀಡಿದೆ.
ಆದರೆ ಈ ಬಾರಿ ಸಮಿತಿಯ ವಿಶೇಷತೆ ಕೇವಲ ಕಲಾತ್ಮಕತೆಯಲ್ಲಿ ಮಾತ್ರ ಸೀಮಿತವಾಗಿರದೆ, ಗ್ರಾಮದ ಸಮಗ್ರ ಅಭಿವೃದ್ಧಿಯ ಅವಶ್ಯಕತೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮಸ್ಥರಲ್ಲಿ ಹೋರಾಟದ ಕಿಚ್ಚು ಹೊತ್ತಿಸುವ ಕೆಲಸವನ್ನೂ ಕೈಗೊಂಡಿದೆ. ಹಬ್ಬದ ಸಂಭ್ರಮದ ನಡುವೆ ಸಮಾಜಮುಖಿ ಚಟುವಟಿಕೆಯನ್ನು ಹಬ್ಬದ ಅಂಗವಾಗಿ ಸೇರಿಸಿರುವುದು ಸ್ಥಳೀಯರಲ್ಲಿ ಹೊಸ ಚೈತನ್ಯವನ್ನು ಉಂಟುಮಾಡಿದೆ.
ವರದಿ: ಶಶಿ ಬೆತ್ತದಕೊಳಲು
