ಜಯಪುರ : ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರಾರಂಭವಾಗಿ 100 ವರ್ಷ ಕಳೆದಿದ್ದು ಶತಮಾನೋತ್ಸವದ ಅಂಗವಾಗಿ ರಾಷ್ಟ್ರಾದ್ಯಂತ 2,50,000ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಿಂದೂ ಸಮಾಜೋತ್ಸವ ಆಯೋಜನೆ ಮಾಡಿದ್ದು, ಕೊಪ್ಪ ತಾಲೂಕು ಹಿಂದು ಸಮಾಜೋತ್ಸವ ಆಯೋಜನ ಸಮಿತಿಯಿಂದ ಮೇಗುಂದಾ ಹೋಬಳಿ ಕೇಂದ್ರ ಸ್ಥಾನ ಜಯಪುರದಲ್ಲಿ ಫೆಬ್ರವರಿ ಒಂದನೇ ತಾರೀಕು ಭಾನುವಾರ ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಮೇಗುಂದಾ ಹೋಬಳಿ ಆಯೋಜನ ಸಮಿತಿಯ ಸಂಯೋಜಕರಾದ ಸುಧಾಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಯಪುರದ ಪತ್ರಿಕಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಹಾಗೂ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಮಾತನಾಡುತ್ತಾ ನಮ್ಮೆಲ್ಲ ಹಿಂದುಗಳ ಹೆಮ್ಮೆಯ ಕಾರ್ಯಕ್ರಮ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ನೂರಾರು ಕಾರ್ಯಕರ್ತರು ಒಂದು ತಿಂಗಳಿಗೂ ಅಧಿಕ ದಿನಗಳಿಂದ ಕಾರ್ಯಕ್ರಮ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ. ಭಾನುವಾರ ಬೆಳಗ್ಗೆ 9:30ಕ್ಕೆ ಸರಿಯಾಗಿ ಜಯಪುರ ವರ್ತೆಕಲ್ ಮಹಾಗಣಪತಿ ದೇವಸ್ಥಾನದಿಂದ 500ಕ್ಕೂ ಹೆಚ್ಚು ಮಾತೆಯರ ಪೂರ್ಣಕುಂಭ, ದೇಶಕ್ಕಾಗಿ ದುಡಿದ ಹಾಗೂ ಪ್ರಾಣ ತ್ಯಾಗ ಮಾಡಿದ ಮಹಾಪುರುಷರ ಸ್ತಬ್ಧ ಚಿತ್ರಗಳು, ಚಂಡೆವಾದನ, ಭಜನಾ ಕುಣಿತ ಹಾಗೂ ವಿವಿಧ ಕಲಾತಂಡಗಳ ಮುಖಾಂತರ ಶೋಭಾ ಯಾತ್ರೆಯು ಜಯಪುರದ ಮುಖ್ಯ ನಗರದಲ್ಲಿ ಸಾಗಿ ನಂತರ ಮಕ್ಕಿಕೊಪ್ಪದ ಜಯ ಪೂಜಾರಿಯವರ ಗದ್ದೆಯಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ. ಸಭೆಯಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರ ಹರಿಹರಪುರದ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದು, ದಿಕ್ಸೂಚಿ ಭಾಷಣವನ್ನು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ನಡೆಸಿಕೊಡಲಿದ್ದಾರೆ. ಆಗಮಿಸಿರುವ ಎಲ್ಲಾ ಸಮಾಜ ಬಾಂಧವರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜಯಪುರ ಮಂಡಲದ ಸಂಚಾಲಕರಾದ ಚಂದ್ರಶೇಖರ್ ಮಳಿಗೆ, ತಾಲೂಕು ಸಮಿತಿಯ ಉಪಾಧ್ಯಕ್ಷರಾದ ರಂಗನಾಥ್ ರಾಂಪಲ್, ಸಹಸಂಯೋಜಕರಾದ ಬೋಜ ಶೆಟ್ಟಿ, ಹೋಬಳಿ ಸಹಸಂಯೋಜಕರಾದ ಗಜೇಂದ್ರ, ಪ್ರಚಾರ ಸಮಿತಿಯ ಮುಖ್ಯಸ್ಥರಾದ ಜಯಂತಿ ನಾಗರಾಜ್, ಮಂಡಲ ಸಮಿತಿಯ ಸದಸ್ಯರಾದ ಪ್ರಭಾಕರ್, ಅನಂತ ಹೆಬ್ಬಾರ್, ಮಹಿಳಾ ಸಮಿತಿಯ ಮುಖ್ಯಸ್ಥರಾದ ಸುನಿತಾ ಶ್ರೀನಿವಾಸ್, ಮಂಡಲ ಸಹಸಂಯೋಜಕರಾದ ಸಂತೋಷ್, ಸದಸ್ಯರಾದ ಶೇಖರ್ ಇದ್ದರು.
