ಜಯಪುರ: ಜಯಪುರದ ಗ್ರಾಮಸ್ಥರ ಹಲವು ವರ್ಷಗಳ ಕನಸಾಗಿದ್ದ ಜಯಪುರ ರಸ್ತೆ ಅಗಲೀಕರಣ ಇದೀಗ ಶೃಂಗೇರಿ ಕ್ಷೇತ್ರದ ಶಾಸಕ ಟಿ. ಡಿ ರಾಜೇಗೌಡರ ಸತತ ಪ್ರಯತ್ನದಿಂದಾಗಿ ನನಸಾಗುವ ಹಂತದಲ್ಲಿದ್ದು, ಕಾಮಗಾರಿ ಸರ್ಕಾರದ ಮಾನದಂಡದ ಪ್ರಕಾರ ನಡೆಯದ ಕಾರಣ ದೇವರು ಕೊಟ್ಟರೂ ವರ ದಕ್ಕದಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅನಿಲ್ ಡಿಮೆಲ್ಲೋ ದೂರಿದ್ದಾರೆ.

ಈ ಹಿಂದೆ ಕೊಪ್ಪ ಪಟ್ಟಣದ ರಸ್ತೆ ಅಗಲೀಕಣ ಸಂದರ್ಭದಲ್ಲಿ ಕಾಮಗಾರಿಯು ಸರ್ಕಾರದ ಮಾನದಂಡದ ಪ್ರಕಾರ ನೆರವೇರಿಸದಿರುವ ಕಾರಣ ಕೆಲವೇ ವರ್ಷಗಳಲ್ಲಿ ಮತ್ತೆ ಕೊಪ್ಪ ಪಟ್ಟಣ ಆಗಲೀಕರಣದ ಕೂಗು ಕೇಳಿಬರುತ್ತಿದೆ. ಮತ್ತೆ ಮತ್ತೆ ರಸ್ತೆ ಅಗಲೀಕರಣ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದು ಮಾತ್ರವಲ್ಲ ಜನರ ತೆರಿಗೆಯ ಹಣವೂ ಪೋಲಾಗಲಿದೆ.
ಹಾಲಿ ಶಾಸಕರಾದ ಟಿ.ಡಿ. ರಾಜೇಗೌಡರ ಮುಂದಾಲೋಚನೆಯ ಕಾರಣ, ಬಾಳೆಹೊನ್ನೂರು ಗ್ರಾಮ ಪಂಚಾಯಿತಿ ಹಾಗೂ ವರ್ತಕರ ಸಹಕಾರದಿಂದ ಬಾಳೆಹೊನ್ನೂರು ಪಟ್ಟಣದ ರಸ್ತೆ ಅಗಲೀಕರಣ ವೈಜ್ಞಾನಿಕವಾಗಿ ನಿರ್ಮಿಸಿ ಮಾದರಿ ರಸ್ತೆ ಅಗಲೀಕರಣ ಮಾಡಿ, ಸಾರ್ವಜನಿಕರ ಪ್ರಶಂಸೆಗೂ ಪಾತ್ರರಾಗಿದ್ದಾರೆ.

ಜಯಪುರ-ಕೊಪ್ಪ- ಆಗುಂಬೆ ಮಾರ್ಗದ ಮೂಲಕ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಕಲ್ಪಿಸುವ ಜಿಲ್ಲಾ ಪ್ರಮುಖ ರಸ್ತೆ ಇದಾಗಿದ್ದು, ಜಯಪುರ ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿ ಸರ್ಕಾರದ ಮಾನದಂಡದoತೆ ನಡೆಯದಿದ್ದಲ್ಲಿ ಮತ್ತೆ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಲಿದೆ. ಆದ್ದರಿಂದ ಸಮಾನ ಮನಸ್ಕರ ಸಮಿತಿ ರಚಿಸಿ ಈಗಾಗಲೇ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ, ನಿಗಮಕ್ಕೆ ದೂರು ಸಲ್ಲಿಸಲಾಗಿದ್ದು, ಸರ್ಕಾರಿ ಮಾನದಂಡದಂತೆ ರಸ್ತೆ ಅಗಲೀಕರಣ ಆಗದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರದಿ: ಶಶಿ ಬೆತ್ತದಕೊಳಲು
