ಜಯಪುರ: ಸಾಮಾಜಿಕ ಕಾರ್ಯಕರ್ತ ಕುಕ್ಕುಡಿಗೆ ರವಿಂದ್ರರವರು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ನೀಡುವ ಹೆಚ್ ನರಸಿಂಹಯ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಡಿಸೆಂಬರ್ 28ರಂದು ಯಾದಗಿರಿ ನಗರದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋದನಾ ಪರಿಷತ್ತಿನ ರಾಜ್ಯ ಸಮ್ಮೇಳನದಲ್ಲಿ ಸಮ್ಮೇಳನಾದ್ಯಕ್ಷ ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಹಾಗೂ ರಾಜ್ಯ ವೈಜ್ಞಾನಿಕ ಸಂಶೋದನಾ ಪರಿಷತ್ತಿನ. ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ರವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
2022 ರಲ್ಲಿ ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸಾಮಾಜಿಕ ಕಾರ್ಯಕರ್ತ ಹೆಚ್ ಟಿ ರಾಜೇಂದ್ರ, 2023ರಲ್ಲಿ ಶೃಂಗೇರಿ ತಾಲೂಕಿನ ಪ್ರಗತಿಪರ ಚಿಂತಕ ಕಲ್ಕುಳಿ ವಿಠಲ ಹೆಗ್ಡೆ, 2024ರಲ್ಲಿ ಕಡೂರಿನ ಮಾಜಿ ಶಾಸಕ ವೈ ಎಸ್ ವಿ ದತ್ತ ಈ ಪ್ರಶಸ್ತಿಗೆ ಭಾಜನರಾಗಿದ್ದರು.
ಕುಕ್ಕುಡಿಗೆ ರವಿಂದ್ರ ರೈತ ಮತ್ತು ಕಾರ್ಮಿಕ ಚಳುವಳಿಯ ನೇತಾರರಾಗಿ, ಬಡವರ, ವಸತಿ ರಹಿತರ, ತುಳಿತಕ್ಕೊಳಗಾದವರ ಪರ ಅನೇಕ ಹೋರಾಟಗಳನ್ನು ನಡೆಸಿದವರು. ಹೇರೂರು ಮಂಡಲ ಪಂಚಾಯ್ತಿ ಪ್ರಧಾನರಾಗಿ, ಕೊಪ್ಪ ತಾಲೂಕು ಪಂಚಾಯ್ತಿ ಉಪಾಧ್ಯಕ್ಷರಾಗಿ, ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ, ಹೇರೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ, ಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ, ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ, ಕೊಪ್ಪ ತಾಲೂಕು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ, ಶ್ರೀ ರಾಮ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ಹೇರೂರು ಸರ್ಕಾರಿ ಪ್ರೌಢಶಾಲೆಯ ಸ್ಥಾಪಕ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವುದು ಸೇರಿದಂತೆ ರೈತ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕಾರ್ಮಿಕ ಸಂಘಟನೆಗಳು, ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಕೊಂಡು ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಿದ್ದು, ಕುಕ್ಕುಡಿಗೆ ರವಿಂದ್ರರಿಗೆ ರಾಜ್ಯ ವೈಜ್ಞಾನಿಕ ಸಂಶೋದನಾ ಪರಿಷತ್ ಹೆಚ್ ನರಸಿಂಹಯ್ಯ ಪ್ರಶಸ್ತಿ ನೀಡಲು ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತ ಎಂದು ನಾಗರೀಕರು ಅಭಿಪ್ರಾಯ ಪಟ್ಟಿದ್ದಾರೆ.
ವರದಿ: ಶಶಿ ಬೆತ್ತದಕೊಳಲು
