ಕಡೂರು: ಹಣ ದುರುಪಯೋಗ ಮತ್ತು ಕರ್ತವ್ಯ ಲೋಪ ಆರೋಪದ ಹಿನ್ನೆಲೆ ತಾಲ್ಲೂಕು ಪುರ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನ್ನು ಅಮಾನತು ಮಾಡಲು ಆದೇಶ ಹೊರಡಿಸಲಾಗಿದೆ.
ಹೌದು .. ಗ್ರಾಮ ಪಂಚಾಯಿತಿ ಪಿಡಿಒ ಬಿ. ಎಸ್. ಶುಭಲಕ್ಷ್ಮಿ ಹಾಗೆ ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಅವರನ್ನು ಸಸ್ಪೆಂಡ್ ಮಾಡಲು ಆದೇಶ ಹೊರಡಿಸಿದ್ದಾರೆ.
ಕುಂಕಾನಾಡು ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶುಭಲಕ್ಷ್ಮಿ ಅವರು, ಪುರ ಗ್ರಾ.ಪಂ. ವರ್ಗ-1ರ ಖಾತೆಯಲ್ಲಿನ ಹಣವನ್ನು ಕಾನೂನು ಬಾಹಿರವಾಗಿ ವ್ಯಯಮಾಡಿದ್ದಾರೆ ಎಂದು ಕುಂಕನಾಡು ಆರ್.ಮಂಜುನಾಥ್ ಎಂಬುವರು ನೀಡಿದ ದೂರಿನ ಅನ್ವಯ ತನಿಖೆ ನಡೆದಿದೆ.
ಈ ಹಿಂದೆ ಪುರ ಗ್ರಾ.ಪಂ.ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ 2023-24ನೇ ಸಾಲಿನಲ್ಲಿ ವರ್ಗ-1ರಲ್ಲಿ ನೀರುಗಂಟಿಗಳಿಗೆ ನಿಯಮ ಬಾಹಿರವಾಗಿ ಚೆಕ್ ಮೂಲಕ ₹4.62 ಲಕ್ಷ ಹಣ ಪಾವತಿಸಿದ್ದಲ್ಲದೇ, ಚುನಾವಣಾ ವೆಚ್ಚದ ಹಣವನ್ನು ಪಾವತಿಸಿ ಹಣಸಂದ ರಶೀದಿಗೆ ಸಹಿ ಪಡೆದಿರಲಿಲ್ಲ.
ಹಾಗೆ ಖರೀದಿ ಪುಸ್ತಕ, ಸಾಮಗ್ರಿಗಳ ದಾಸ್ತಾನು ಮತ್ತು ವಿತರಣಾ ವಹಿಯನ್ನು ಸಮರ್ಪಕವಾಗಿ ನಿರ್ವಹಿಸದೇ, ಕರ್ತವ್ಯ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಅವರ ವಿರುದ್ಧ ಕ್ರಮ ಜರುಗಿಸಲು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ ಸಿಇಒಗೆ ವರದಿ ಸಲ್ಲಿಸಿದ್ದರು. ಇದೀಗ ಸೇವೆಯಿಂದ ಅಮಾನತು ಮಾಡಲಾಗಿದೆ.