ಕಳಸ: ‘ಪ್ರಜೆಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಈಡೇರುತ್ತದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಹೇಳಿದರು.
ಕುದುರೆಮುಖದ ಕೆಂಗನಕೊಂಡದಲ್ಲಿ ಭಾನುವಾರ ಆರಂಭವಾದ ಜನಶಕ್ತಿ ಸಂಘಟನೆಯ ಸಂಘಟನಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಮತದಾನ ಮಾಡಿದ ಮಾತ್ರಕ್ಕೆ ನಮ್ಮ ಹಕ್ಕು ಮುಗಿಯುವುದಿಲ್ಲ. ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದಕ್ಕಬೇಕು. ಕೇವಲ ಮೀಸಲಾತಿಯಿಂದ ಇದು ದಕ್ಕುವುದಿಲ್ಲ. ಎಲ್ಲ ಜಾತಿ ವರ್ಗದವರಿಗೂ ಉದ್ಯೋಗ, ರಾಜಕೀಯ, ಆರ್ಥಿಕತೆಯಲ್ಲಿ ಸಮಾನ ಅವಕಾಶ ಸಿಗಬೇಕು’ ಎಂದು ಅವರು ಪ್ರತಿಪಾದಿಸಿದರು.
ಜನರ ಸಮಸ್ಯೆ ಬಗೆಹರಿಯಲು ಜನಪರ ಚಳವಳಿ ಬೇಕು. ರಾಜಕಾರಣದಿಂದ ಸಾಧ್ಯವಾಗದಿರುವುದನ್ನು ಜನಜಾಗೃತಿ ಮತ್ತು ಚಳವಳಿಗಳಿಂದ ಈಡೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಕೀಲ ಕೆ.ಪಿ. ಶ್ರೀಪಾಲ್, ವಿವಿಧ ಸಂಘಟನೆಗಳ ಮುಖಂಡರಾದ ಕೆ.ಎಲ್. ಅಶೋಕ್, ಕಲ್ಕುಳಿ ವಿಠಲ ಹೆಗ್ಡೆ, ಕೆಂಗನಕೊಂಡ ಸುರೇಶ್ ಭಟ್, ಅತ್ತಿಕುಳಿ ಸುಂದರೇಶ್, ಗುರುಮೂರ್ತಿ ಹಾಗಲಗಂಚಿ ಮಲೆನಾಡಿನ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಜನಶಕ್ತಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನೂರ್ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಗೌಸ್ ಮೊಹಿದ್ದೀನ್, ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ, ಕರ್ನಾಟಕ ರೈತ ಸಂಘದ ಕಾರ್ಯಾಧ್ಯಕ್ಷ ವೀರಸಂಗಯ್ಯ, ಮುಖಂಡರಾದ ಕಿರಣ್ ಕಮಲ್ ಪ್ರಸಾದ್, ಬಸವರಾಜ್ ಕೌತಾಳ್, ಶೃಂಗೇಶ್, ಸತೀಶ್ ಜೈನ್, ಕೆ.ಎಲ್. ವಾಸು, ಸುರೇಶ್ ಗಡಿಕಲ್, ರಾಧಾ ಹಾಗಲಗಂಚಿ, ರಾಜ್ಯದ ವಿವಿಧ ಭಾಗಗಳಿಂದ ಜನಶಕ್ತಿ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.
