ಕೊಪ್ಪ: ತಾಲೂಕಿನ ಅಗಳಗಂಡಿ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕ 1 ಮತ್ತು 2 ವತಿಯಿಂದ 2025-26ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು “ಸದೃಢ ವಿಕಸಿತ ಭಾರತಕ್ಕಾಗಿ ಯುವಜನತೆ” ಎಂಬ ಧ್ಯೇಯ ವಾಕ್ಯದೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಧಕ್ಷತೆಯನ್ನು ಪ್ರಗತಿಪರ ಕೃಷಿಕರಾದ ಎಂ.ಕೆ. ಚಂದ್ರಶೇಖರ್ ಅವರು ವಹಿಸಿಕೊಂಡು, ಯುವಜನತೆ ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಹೊಂದಿದ್ದು, ಗ್ರಾಮೀಣ ಮಟ್ಟದಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವೆಂದು ಅಭಿಪ್ರಾಯಪಟ್ಟರು.
ವಿಶೇಷ ಉಪನ್ಯಾಸಕರಾಗಿ ಪತ್ರಕರ್ತ ಅಭಿನವ್ ಅವರು “ಸಮೂಹ ಮಾಧ್ಯಮ ಹಾಗೂ ಸಾಮಾಜಿಕ ಜವಾಬ್ಧಾರಿ” ಕುರಿತು ಉಪನ್ಯಾಸ ನೀಡಿದರು. ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು, ಸುದ್ದಿ ವಾಹಿನಿಗಳು ಸಾರ್ವಜನಿಕ ಅಭಿಪ್ರಾಯ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸುತ್ತಿವೆ ಎಂದು ಹೇಳಿದರು. ಮಾಧ್ಯಮಗಳು ಕೇವಲ ಮಾಹಿತಿಯನ್ನು ಹಂಚುವ ಸಾಧನಗಳಲ್ಲ; ಅವು ಸಮಾಜದ ದಿಕ್ಕು ತೋರಿಸುವ ಶಕ್ತಿಯಾಗಿದೆ. ಆದ್ದರಿಂದ ಸುಳ್ಳು ಸುದ್ದಿಗಳ ಪ್ರಸಾರವನ್ನು ತಪ್ಪಿಸುವುದು, ಮಾಹಿತಿ ಪರಿಶೀಲನೆ (ಫ್ಯಾಕ್ಟ್ ಚೆಕಿಂಗ್), ನೈತಿಕ ಪತ್ರಿಕೋದ್ಯಮ, ಮತ್ತು ಜವಾಬ್ದಾರಿಯುತ ಸಾಮಾಜಿಕ ಮಾಧ್ಯಮ ಬಳಕೆ ಯುವಜನತೆಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಯುವಕರು ತಾವು ಹಂಚಿಕೊಳ್ಳುವ ಪ್ರತಿಯೊಂದು ಮಾಹಿತಿಯೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅರಿವು ಹೊಂದಿರಬೇಕು ಎಂದು ಅವರು ಕರೆ ನೀಡಿದರು.

ನಿವೃತ್ತ ಪ್ರಾಂಶುಪಾಲರಾದ ಉದಯ ಕುಮಾರ್ ಬಿ.ಎಸ್. ಅವರು “ಗ್ರಾಮೀಣ ಸಮಾಜ ಮತ್ತು ಯುವ ಜನತೆ” ವಿಷಯವಾಗಿ ಉಪನ್ಯಾಸ ನೀಡಿದರು. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅನಿವಾರ್ಯವಾಗಿದ್ದು, ಶಿಕ್ಷಣ, ಸ್ವಚ್ಛತೆ, ಪರಿಸರ ಸಂರಕ್ಷಣೆ, ಮತ್ತು ಸ್ವಾವಲಂಬನೆ ಕ್ಷೇತ್ರಗಳಲ್ಲಿ ಯುವಕರು ಮುನ್ನಡೆಸಬೇಕೆಂದು ಹೇಳಿದರು. ಗ್ರಾಮೀಣ ಸಮಾಜದ ಮೂಲ ಮೌಲ್ಯಗಳಾದ ಸಹಕಾರ, ಪರಸ್ಪರ ಸಹಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಕೃಷಿ, ಸ್ವ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಮೂಲಕ ಗ್ರಾಮೀಣ ಯುವಕರು ಆತ್ಮನಿರ್ಭರರಾಗಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಉಮೇಶ್ ಕೆ.ಕೆ., ಸ.ಹಿ.ಪ್ರಾ. ಶಾಲೆ ಅಗಳಗಂಡಿಯ ಎಸ್.ಡಿ.ಎಂ.ಸಿ. ಸದಸ್ಯರಾದ ಶ್ರೀಮತಿ ಪ್ರೇಮ ಹಾಗೂ ಶ್ರೀಮತಿ ಸೌಮ್ಯ, ಎನ್.ಎಸ್.ಎಸ್. ಸಂಚಾಲಕರಾದ ನಾಗರಾಜ್ ಮತ್ತು ಶುಭಾಷ್ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ದೇಶಭಕ್ತಿ ಗೀತೆಗಳು, ನೃತ್ಯ ಮತ್ತು ನಾಟಕಗಳ ಮೂಲಕ ಯುವಜನತೆ ಸಾಮಾಜಿಕ ಜಾಗೃತಿ ಮತ್ತು ರಾಷ್ಟ್ರೀಯ ಏಕತೆ ಸಂದೇಶವನ್ನು ರಂಗೇರಿಸಿದರು
