ಶೃಂಗೇರಿ ಭಾಗದಲ್ಲಿ ಮತ್ತೆ ಒಂಟಿ ಆನೆ ಓಡಾಟ ಪ್ರಾರಂಭವಾಗಿದ್ದು, ರೈತರ ಜಮೀನಿನಲ್ಲಿ ಬೆಳೆ ನಾಶ ಮಾಡಿದ ಘಟನೆಗಳು ನಡೆದಿವೆ.
ಈ ಸಂಬಂಧ ಅರಣ್ಯ ಇಲಾಖೆಯ ವತಿಯಿಂದ ಪ್ರಕಟಣೆ ಹೊರಡಿಸಿದ್ದು ಅಡ್ಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಣ್ಣುಕೊಡಿಗೆ, ಕಾವಲುಕೊಡಿಗೆ, ಚಿತ್ರವಳ್ಳಿ, ಹಾಗೂ ಸುತ್ತಮುತ್ತಲಿನ ವಾಹಿನಿಯವರಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
ಅಣ್ಣುಕೊಡಿಗೆ ಎಂಬಲ್ಲಿ ಒಂದು ಒಂಟಿ ಕಾಡಾನೆ ಸಂಚರಿಸುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಜಾಗರೂಕರಾಗಿ ಇರಬೇಕೆಂದು ಹಾಗೂ ರಸ್ತೆಯಲ್ಲಿ ಸಂಚರಿಸುವವರು, ಶಾಲಾ ಮಕ್ಕಳು, ವೃದ್ಧರು ಹೆಚ್ಚಿನ ಜಾಗರೂಕತೆಯಿಂದ ಸಂಚರಿಸಬೇಕೆಂದು ಅರಣ್ಯ ಇಲಾಖೆ ಕೋರಿದೆ.
ಹಾಗೆ ಸಂಜೆ 6.00 ಗಂಟೆ ಬಳಿಕ ಈ ಗ್ರಾಮಗಳಲ್ಲಿ ವಾಹನಗಳಲ್ಲಿ ಹಾಗೂ ಕಾಲ್ನಡಿಗೆಯಲ್ಲಿ ಅನಗತ್ಯವಾಗಿ ಓಡಾಡಬಾರದೆಂದು ಸಹ ತಿಳಿಸಿದೆ. ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದೆ.
