ಚಿಕ್ಕಮಗಳೂರು: ಸುಮಾರು 20 ಅಡಿ ಆಳದಲ್ಲಿ ಕೆರೆ ನೀರಿಗೆ ಬಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಇರುವ ಚೀಲವನ್ನು ಮೇಲಕ್ಕೆತ್ತಿದ ಈಶ್ವರ್ ಮಲ್ಪೆ ಅವರ ತಂಡ ವಾರಸುದಾರರಿಗೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.

ಅಕ್ಟೋಬರ್ 27 ರಂದು ಹರಿಹರ ಮೂಲದ ಸದಾನಂದ ಎಂಬವರು ಚಿಕ್ಕಮಗಳೂರಿಗೆ ಮದುವೆ ಸಮಾರಂಭಕ್ಕೆಂದು ಬಂದಿದ್ದರು. ಈ ವೇಳೆ ಚಿಕ್ಕಮಗಳೂರು ಮಾಗಡಿ ಬಳಿ ಅವರ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕೆರೆಗೆ ಬಿದ್ದಿತ್ತು. ಈ ಸಂದರ್ಭದಲ್ಲಿ ಸದಾನಂದ ಅವರು ಈಜಿ ದಡ ಸೇರಿದ್ದರು. ಬಳಿಕ ಕ್ರೇನ್ ತರಿಸಿ ಕಾರು ಮೇಲಕ್ಕೆತ್ತಲಾಗಿತ್ತು. ಆದರೆ ಈ ವೇಳೆ ಕಾರಿನಲ್ಲಿದ್ದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಕೆರೆ ಬಿದ್ದಿತ್ತು. ಸ್ಥಳೀಯರು ನೀಡಿದ ಸಲಹೆಯಂತೆ ಸದಾನಂದ ಅವರು ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಈಶ್ವರ್ ಮಲ್ಪೆ ಕೇವಲ 15 ನಿಮಿಷದಲ್ಲಿ ಚಿನ್ನಾಭರಣವಿದ್ದ ಬ್ಯಾಗ್ ನೀರಿನಿಂದ ಮೇಲಕ್ಕೆತ್ತಿದ್ದಾರೆ.
ಈ ವೇಳೆ ಮಾತನಾಡಿದ ಈಶ್ವರ್ ಮಲ್ಪೆ ಚಿನ್ನಾಭರಣವಿದ್ದ ಚೀಲ ಕೆಸರಿನಲ್ಲಿ ಹೂತು ಹೋಗಿತ್ತು. ಎಲ್ಲಡೆ ಕತ್ತಲೆ, ಕಣ್ಣಿಗೆ ಏನೂ ಕಾಣುತ್ತಿರಲಿಲ್ಲ. ಸುಮಾರು 20 ಅಡಿಗಳಷ್ಟು ಆಳಕ್ಕೆ ಹೋಗಿ ಜಾಲಾಡಿದಾಗ ಕೈಗೆ ಸಿಕ್ಕಿತು. ದೇವರ ಅನುಗ್ರಹ ಹಾಗೂ ಜನರ ಆಶೀರ್ವಾದದಿಂದ ಚಿನ್ನ ಮತ್ತೆ ಸಿಗುವಂತಾಗಿದೆ ಎಂದು ಈಶ್ವರ್ ಮಲ್ಪೆ ತಿಳಿಸಿದ್ದಾರೆ. ಇನ್ನು ಈಶ್ವರ್ ಮಲ್ಪೆ ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
